ಬೆಂಗಳೂರು: ”ಇಡೀ ಜಗತ್ತೇ ಒಪ್ಪಿರುವ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ಆಡಿರುವ ಮಾತು ಆ ಪಕ್ಷದ ಗುಣ ಮತ್ತು ಅವರ ಚಾರಿತ್ರ್ಯದ ಮೇಲೆ ಬೆಳಕು ಚೆಲ್ಲಲಿದೆ” ಎಂದು ಬಿಜೆಪಿ ವಕ್ತಾರ ಎಂ ಜಿ ಮಹೇಶ್ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ”ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಲಿದೆ. ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ವಿಚಾರದ ಬಗ್ಗೆ ಮಾತನಾಡುತ್ತ ಪ್ರಜಾಪ್ರಭುತ್ವದ ಯಾವುದೇ ಮೌಲ್ಯಗಳಿಗೆ ಬೆಲೆ ಕೊಡದ ಶಬ್ಧಗಳನ್ನು ಅವರು ಉಲ್ಲೇಖ ಮಾಡಿದ್ದಾರೆ. ಇಡೀ ಜಗತ್ತು ಒಪ್ಪಿಕೊಂಡಿರುವ ಒಬ್ಬ ಉತ್ತಮ ನಾಯಕನನ್ನು ಒಬ್ಬ ಪೆಟ್ಟಿ ರಾಜಕಾರಣಿ, ಮೋಸಗಾರ, ಚಿಲ್ಲರೆ ರಾಜಕಾರಣಿ ಈ ರೀತಿ ಪದಪುಂಜಗಳನ್ನ ಉಗ್ರಪ್ಪ ಬಳಸಿದ್ದಾರೆ. ಅವರ ಮಾತು ಆ ಪಕ್ಷದ ಸ್ವಭಾವವನ್ನು ತೋರುತ್ತದೆ” ಎಂದು ತಿರುಗೇಟು ನೀಡಿದರು.
”ಪ್ರಧಾನಿ ಮೋದಿ ಅವರ ಮೇಲೆ ಕೆಸರು ಎರಚಿದಷ್ಟೂ ಬಿಜೆಪಿ ಮತ್ತಷ್ಟು ಪ್ರಜ್ವಲಿಸಲಿದೆ. ಕಮಲ ಎಲ್ಲಾ ಕಡೆ ಅರಳಲಿದೆ, ಇಂದು ಉಗ್ರಪ್ಪ ನಡೆಸಿದ ಇಡೀ ಪತ್ರಿಕಾಗೋಷ್ಟಿಯಲ್ಲಿ ಅವರು ಉಲ್ಲೇಖ ಮಾಡಿದ ಎಲ್ಲಾ ಅಂಶಗಳು ಸತ್ಯಕ್ಕೆ ದೂರವಾದ ಅಂಶಗಳಾಗಿವೆ. ಯಾವುದೇ ಸಂದರ್ಭದಲ್ಲಿಯೂ ಮೋದಿ 15 ಲಕ್ಷ ಹಣವನ್ನು ಎಲ್ಲರ ಖಾತೆಗೆ ಹಾಕುತ್ತೇನೆ ಎಂದು ಹೇಳಿಲ್ಲ.