ದೊಡ್ಡಬಳ್ಳಾಪುರ : ಟೊಮೆಟೊಗೆ ಇವತ್ತು ಚಿನ್ನದ ಬೆಲೆ.
ಉತ್ತಮ ಬೆಲೆ ಸಿಗುವ ಸಮಯಕ್ಕೆ ಟೊಮೆಟೊ ಬೆಳೆಯ ಭರ್ಜರಿ ಫಸಲು ಬಂದಿತ್ತು. ಆದರೆ, ಕಂಪನಿಯೊಂದರ ಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡಿದ್ದರಿಂದ ತಾಲೂಕಿನಲ್ಲಿ ಇಡೀ ಟೊಮೆಟೊ ಬೆಳೆ ಒಣಗಿನಿಂತಿದೆ ಎಂದು ರೈತರು ಆರೋಪಿಸಿದ್ದಾರೆ. ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಅಡುಗೆ ಮನೆಯ ರಾಣಿ, ಕೆಂಪು ಸುಂದರಿ ಎಂದೇ ಟೊಮೆಟೊ ಪ್ರಸಿದ್ಧಿ ಪಡೆದಿದೆ. ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆಗೆ ಬಂಗಾರದ ಬೆಲೆ ಇದೆ. ಇವತ್ತು ಟೊಮೆಟೊ ಬೆಳೆದವನೇ ಸಿರಿವಂತ ಅನ್ನುವ ಮಾತುಗಳು ಸಹ ಶುರುವಾಗಿವೆ. ಆದರೆ, ತಾಲೂಕಿನಲ್ಲಿ ರೈತರೊಬ್ಬರು ಟೊಮೆಟೊ ಬೆಳೆದ್ರು ಸಹ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಗಿಡ್ಡೇಗೌಡ ನಷ್ಟ ಅನುಭವಿಸಿದ ರೈತ. ಈ ಕುರಿತು ಮಾತನಾಡಿರುವ ಅವರು, ”ಒಂದು ಎಕರೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದೇವೆ. ಹುಲುಸಾಗಿ ಬೆಳೆದಿದ್ದ ಟೊಮೆಟೊ ಹೂಬಿಟ್ಟು ಫಸಲು ಕೊಡಲು ಪ್ರಾರಂಭಿಸಿತ್ತು. ಆದರೆ ಇದೇ ಸಮಯಕ್ಕೆ ಖಾಸಗಿ ಕಂಪನಿಯ ಕ್ರಿಮಿನಾಶಕ ಔಷಧಿಯ ಪ್ರತಿನಿಧಿ ನಮ್ಮನ್ನು ಭೇಟಿ ಮಾಡಿ, ಉಚಿತವಾಗಿ ಕ್ರಿಮಿನಾಶಕ ಔಷಧಿ ಕೊಡುತ್ತೇವೆ. ಗಿಡಗಳಿಗೆ ಸಿಂಪಡಣೆ ಮಾಡಿ ಭರ್ಜರಿ ಫಸಲು ಬರುತ್ತೆ ಹೇಳಿದ್ದರು. ಈಗ ಎಲ್ಲವೂ ಹಾಳಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.