ಉಡುಪಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಹೆಚ್ಚುತ್ತಲೇ ಇದೆ. ಶುಕ್ರವಾರ ಒಂದೇ ದಿನ ದ್ವಿಶತಕ ದಾಖಲಿಸಿದ್ದ ಕೊರೊನಾ, ಶನಿವಾರ ಶತಕ ದಾಖಲಿಸಿದೆ. 121 ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು, ಈ ಮೂಲಕ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರ, ಜಿಲ್ಲೆಗೆ ದಿನೇ ದಿನೇ ಕಂಟಕವಾಗುತ್ತಿದೆ. ಮುಂಬೈಯಿಂದ ಜಿಲ್ಲೆಗೆ ಬಂದ ಶೇ.10 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದ್ದು ಜಿಲ್ಲೆಯ ಜನರಲ್ಲಿ ಆತಂಕವನ್ನು ಮೂಡಿಸಿದೆ. ಉಡುಪಿಗೆ ಮುಂಬೈನಿಂದ ಬಂದ 853 ಜನರಲ್ಲಿ ಈವರೆಗೆ ಕೊರೊನಾ ದಾಖಲಾಗಿದೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾಡಳಿತದಿಂದ ತಯಾರಿ ಮಾಡಿದೆ. ಒಂದು ಪ್ರಕರಣ ದಕ್ಷಿಣ ಕನ್ನಡದ್ದಾಗಿದ್ದು ಅಲ್ಲಿಗೆ ಮಾಹಿತಿ ನೀಡಿದ್ದೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದರು.
ಇಂದು ಒಂದೇ ದಿನ 101 ಜನ ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಯಾವ ರೋಗಿಗಳೂ ಕ್ರಿಟಿಕಲ್ ಇಲ್ಲ. ಐಸಿಯು ಬಳಸಿಲ್ಲ. ಈತನಕ ಯಾರಿಗೂ ವೆಂಟಿಲೇಟರ್ ಬಳಕೆ ಮಾಡಿಲ್ಲ ಎಂಬುದು ಸಮಾಧಾನಕರ ಸಂಗತಿ. ಜನರು ಆತಂಕ ಪಡುವ ಅಗತ್ಯ ಇಲ್ಲ, ಎಲ್ಲರೂ ಗುಣಮುಖರಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದರು. ಭಾನುವಾರ ಸುಮಾರು 40 ರಿಂದ 50 ಜನರಲ್ಲಿ ಪಾಸಿಟಿವ್ ಬರುವ ಸಾಧ್ಯತೆ ಇದೆ ಎಂಬ ಮಾಹಿತಿಯಿದೆ.