ಚನ್ನೈ: ತಮಿಳುನಾಡಿನ ಸಣ್ಣ ಮತ್ತು ಅತಿ ಸಣ್ಣ ರೈತರು ಸಹಕಾರಿ ಬ್ಯಾಂಕ್ಗಳಿಂದ ಪಡೆದಿದ್ದ ₹50,000ವರೆಗಿನ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ತಮಿಳುನಾಡು ಸರ್ಕಾರ ಸೋಮವಾರ ಘೋಷಿಸಿದೆ.
ಈ ಮೂಲಕ ವಿಧಾನಸಭಾ ಚುನಾವಣೆ ವೇಳೆ ಟಿವಿಕೆ ಪಕ್ಷ ನೀಡಿದ್ದ ಪ್ರಮುಖ ಭರವಸೆಗಳಲ್ಲೊಂದನ್ನು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಈಡೇರಿಸಿದ್ದಾರೆ.
ಜತೆಗೆ ಇತರೆ ರೈತರಿಗೆ ತಲಾ ₹5,000ವರೆಗಿನ ಸಾಲ ಮನ್ನಾ ಸೌಲಭ್ಯವನ್ನು ಪ್ರಕಟಿಸಲಾಗಿದೆ. ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ರಾಜ್ಯದ ಸುಮಾರು 14.22 ಲಕ್ಷ ರೈತರಿಗೆ ನೇರ ಅನುಕೂಲವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹2,044 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎನ್ನಲಾಗಿದೆ.
ಚುನಾವಣಾ ಭರವಸೆ ಈಡೇರಿಕೆ
ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥರಾಗಿದ್ದ ವಿಜಯ್ ಅವರು ರೈತರ ಬೆಳೆ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ಭರವಸೆಯನ್ನು ಈಡೇರಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.
2025 ಮೇ 1ರಿಂದ 2026ರ ಫೆಬ್ರುವರಿ 28ರ ನಡುವೆ ಸಹಕಾರಿ ಬ್ಯಾಂಕ್ಗಳಿಂದ ಪಡೆದ ಬೆಳೆ ಸಾಲಗಳಿಗೆ ಈ ಮನ್ನಾ ಯೋಜನೆ ಅನ್ವಯವಾಗಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಇದರ ಜೊತೆಗೆ ಇತರೆ ವರ್ಗದ ರೈತರಿಗೂ ಸರ್ಕಾರ ಕೆಲವು ಸಾಲ ಮನ್ನಾ ಯೋಜನೆಗಳನ್ನು ಘೋಷಿಸಿದೆ.
Laxmi News 24×7