ಬೆಳಗಾವಿ : ರಾಜ್ಯದಲ್ಲಿ ಖಾತೆ ಕ್ಯಾತೆ ಬೆನ್ನಲ್ಲೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಪರಮ ಆಪ್ತ ಶಾಸಕ ಮಹೇಶ್ ಕುಮಠಳ್ಳಿ ಕುರಿತು ರಾಜಕೀಯ ಭವಿಷ್ಯ ನುಡಿದ್ದಿದ್ದು, ಮಾರ್ಚ್ ಬಳಿಕ ಅವರು ಕೂಡ ಸಚಿವರಾಗ್ತಾರೆ ಎಂದು ಹೇಳಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರುವ ಮಾರ್ಚ್ ಬಳಿಕ ಮಹೇಶ್ ಕುಮಟಳ್ಳಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದು, ಈ ವಿಚಾರವಾಗಿ ಶಿಷ್ಯನಿಗೆ ಸಚಿವ ಸ್ಥಾನ ಕೊಡಿಸಲು ತಲೆ ಕೆಡಿಸಿಕೊಂಡಿದ್ದಾರೆ.
ಈ ಹಿಂದೆಯೂ ಶಾಸಕ ಮಹೇಶ್ ಕುಮಠಳ್ಳಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ನನಗೂ ಸಚಿವ ಸ್ಥಾನ ಸಿಗುತ್ತೆ ಅಂದುಕೊಂಡಿದ್ದೆ. ಆದ್ರೆ ಇದುವರೆಗೆ ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂಬುದು ನನಗೂ ಗೊತ್ತಿಲ್ಲಾ. ಸಚಿವ ಸ್ಥಾನ ನೀಡದ ಕುರಿತು ಸಾಕಷ್ಟು ಬಾರಿ ಪ್ರಶ್ನೆ ಕೇಳಿದ್ದೇನೆ. ಆದ್ರೆ ಆ ಬಗ್ಗೆ ನನಗೆ ಇನ್ನು ಉತ್ತರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರು.
ಖಾತೆ ಮರುಹಂಚಿಕೆಯಿಂದ ಸಚಿವರ ಅಸಮಾಧಾನ ವಿಚಾರವಾಗಿ ಮಾತನಾಡಿ, ಅಣ್ಣ ತಮ್ಮಂದಿರ ಜಗಳ ಮನೆಯೊಳಗೆ ಬಗೆಹರಿಯುತ್ತೆ. ಅದೇ ರೀತಿ ಸಚಿವರ ಒಳ ಜಗಳವನ್ನೂ ಸಹ ಸಚಿವರುಗಳು ಸರಿಪಡಿಸಿಕೊಳ್ತಾರೆ. ಒಂದು ಮನೆ ಅಂದ ಬಳಿಕ ಜಗಳ ಮುನಿಸು ಇವೆಲ್ಲವೂ ಸಹಜ. ಎಲ್ಲವೂ ಸರಿ ಹೋಗುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದೊಂದಿಗೆ ಮಾತುಕತೆ : ಮಹಾರಾಷ್ಟ್ರದವರಿಗೆ ನಾವು ನೀರು ಬಿಡುತ್ತೇವೆ, ಅವರು ನಮಗೆ ನೀರು ಬಿಡುತ್ತಾರೆ. ಈ ಕುರಿತು ಈಗಾಗಲೇ ಮಹಾರಾಷ್ಟ್ರದ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ. ಮಹಾರಾಷ್ಟ್ರದ ಜತೆಗೆ ನಾವು 4 ಟಿಎಂಸಿ ನೀರು ಬಿಡುಗಡೆ ಮಾಡುತ್ತೇವೆ. ಪ್ರತಿಯಾಗಿ ಮಾಹಾರಾಷ್ಟ್ರದಿಂದ ಬೇಸಿಗೆಯಲ್ಲಿ ಕುಡಿಯಲು 6 ಟಿಎಂಸಿ ನೀರು ಬಿಡುಗಡೆ ಮಾಡಲಿದೆ. ಈ ಬಗ್ಗೆ ಅಲ್ಲಿನ ಸಚಿವರು ಹಾಗೂ ಸರ್ಕಾರದೊಂದಿಗೆ ಮಾತುಕತೆ ನಡೆದಿದೆ ಎಂದು ಹೇಳಿದರು.