ಬೆಂಗಳೂರು: ಕರ್ನಾಟಕ ಬಂದ್ಗೂ ಮುನ್ನ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಕಿಚ್ಚು ಜೋರಾಗುತ್ತಿದೆ. ಸಿಡಬ್ಲ್ಯೂಎಂಸಿ ಆದೇಶ ನೀಡುತ್ತಿದ್ದಂತೆ, ಮಂಡ್ಯದ ಸಂಜಯ್ ವೃತ್ತದಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡದಂತೆ ಆಗ್ರಹಿಸಿದ್ದಾರೆ.
ಮಂಡ್ಯದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ತಮಿಳುನಾಡು ಸಿಎಂ ವಿರುದ್ಧ ಧಿಕ್ಕಾರ ಕೂಗಿವೆ. ಇನ್ನೊಂದೆಡೆ, ಕನ್ನಡಪರ ಸಂಘಟನೆಗಳು ಗುರುಶ್ರೀ ಥಿಯೇಟರ್ನಲ್ಲಿ ತಮಿಳುನಾಡು ಸಿಎಂ ವಿಜಯ್ ನಟನೆಯ ಜನನಾಯಗನ್ ಚಿತ್ರದ ಪೋಸ್ಟರ್ ಹರಿದು ಆಕ್ರೋಶ ವ್ಯಕ್ತಪಡಿಸಿವೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ರೈತ ಹಿತರಕ್ಷಣಾ ಸಮಿತಿ ಬೃಹತ್ ಪ್ರತಿಭಟನೆ ನಡೆಸಿತು. ಹಳೆ ಮೈಸೂರು-ಬೆಂಗಳೂರು ಬಂದ್ ಮಾಡಿತು. ಜಾಗ ಖಾಲಿ ಮಾಡಲು ಪೊಲೀಸರು ಹೇಳಿದಾಗ ಹೈಡ್ರಾಮಾ ನಡೆಯಿತು. ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗೆ ಇಳಿದು ರೈತರು ಪ್ರತಿಭಟನೆ ಮಾಡಿದರು. ಮೈಸೂರಿನ ಅಗ್ರಹಾರ ವೃತ್ತದಲ್ಲಿ ಇರುವ ಕಾವೇರಿ ಭವನದ ಎದುರು ಖಾಲಿ ಕೊಡ ಹಿಡಿದು ಧಿಕ್ಕಾರ ಕೂಗಿದರು.
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಸಿದರು. ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ತಲೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಅಂತ ಆಗ್ರಹಿಸಿದರು.
ಕುಶಾಲನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರವಾರದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ಡಿಸಿ ಕಚೇರಿ ಎದುರು ಖಾಲಿ ಕೊಡ ಇಟ್ಟು ಕಪ್ಪುಪಟ್ಟಿ ಧರಿಸಿ ಉಗ್ರ ಹೋರಾಟದ ಎಚ್ಚರಿಕೆ ನೀಡಿತು. ಯಾದಗಿರಿಯಲ್ಲಿ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಬಣ ಪ್ರತಿಭಟನೆ ಮಾಡಿತು. ಈ ಮಧ್ಯೆ, ಕೆಆರ್ಎಸ್ ಬಳಿ ಪೊಲೀಸ್ ಬಿಗಿಭದ್ರತೆ ಹೆಚ್ಚಿಸಲಾಗುತ್ತಿದೆ.
Laxmi News 24×7