ಯಾವುದೇ ಕ್ಷಣದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಸಾಧ್ಯತೆ
ಬೆಂಗಳೂರು,ಫೆ.10- ಸಾಕಷ್ಟು ಕಸರತ್ತು ನಡೆಸಿ ಸಚಿವ ಸಂಪುಟ ವಿಸ್ತರಣೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಯಾವುದೇ ಕ್ಷಣದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದಾರೆ. ಈ ಮೊದಲೇ ತಮ್ಮ ಮಂತ್ರಿ ಮಂಡಲದಲ್ಲಿದ್ದ 17 ಸಚಿವರಿಗೂ ಹೆಚ್ಚುವರಿಯಾಗಿ ಖಾತೆಗಳ ಹಂಚಿಕೆ ಮಾಡಲಾಗಿತ್ತು. ಇದೀಗ ಹೆಚ್ಚುವರಿ ಖಾತೆಗಳನ್ನು ವಾಪಸ್ ಪಡೆದು ನೂತನ ಸಚಿವರಿಗೆ ಹಂಚಿಕೆ ಮಾಡಲಾಗುತ್ತದೆ.
ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿದ್ದು, ಯಾರಿಗೆ ಯಾವ ಖಾತೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈಗಲೂ ಕೂಡ ನೂತನ ಸಚಿವರಿಗೆ ಹೈಕಮಾಂಡ್ ಸೂಚನೆಯಂತೆಯೆ ಖಾತೆಗಳ ಹಂಚಿಕೆಯಾಗಲಿದೆ. ಹೀಗಾಗಿ ಹಂಚಿಕೆಗೆ ಮೊದಲೇ ನೂತನ ಸಚಿವರು ಲಾಭಿಯನ್ನು ನಡೆಸಿದ್ದರು.
ಆದರೆ ಗೃಹ, ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ, ಲೋಕೋಪಯೋಗಿ, ಅರಣ್ಯ, ಇಂಧನ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣ, ಆರೋಗ್ಯ, ಕೃಷಿ, ಬೃಹತ್ ಕೈಗಾರಿಕೆ, ಕಂದಾಯ ಖಾತೆಗಳ ಮರು ಹಂಚಿಕೆಗೆ ಆಯಾ ಖಾತೆಗಳನ್ನು ನಿರ್ವಹಿಸುತ್ತಿರುವ ಸಚಿವರು ಬಿಟ್ಟುಕೊಡಲು ಒಪ್ಪುತ್ತಿಲ್ಲ ಎಂದು ತಿಳಿದುಬಂದಿದೆ. ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಜಾರಕಿಹೊಳಿ ಪಟ್ಟು ಹಿಡಿದಿದ್ದರು.
ಈ ಬೇಡಿಕೆಯನ್ನು ಸಿಎಂ ಈಡೇರಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಮಾಣವಚನಕ್ಕೂ ಮುನ್ನವೇ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ಕೊಡುವಂತೆ ಹೈಕಮಾಂಡ್ಗೂ ಸಿಎಂ ಮನವರಿಕೆ ಮಾಡಿದ್ದಾರೆ. ಡಿಸಿಎಂ ಸ್ಥಾನ ಕೊಡದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಖಾತೆ ಕೊಡಲು ಸಿಎಂ ಒಪ್ಪಿಕೊಂಡಿದ್ದಾರೆ.
ಸುಧಾಕರ್ಗೆ ವೈದ್ಯಕೀಯ ಶಿಕ್ಷಣ ಅಥವಾ ಇಂಧನ ಇಲಾಖೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಬೆಂಗಳೂರು ಅಭಿವೃದ್ಧಿ ಮತ್ತು ಗೃಹ ಖಾತೆಗಳ ಹಂಚಿಕೆ ಸದ್ಯಕ್ಕಿಲ್ಲ. ಇವೆರಡೂ ಖಾತೆಗಳನ್ನೂ ಹಂಚಿಕೆ ಮಾಡದಿರಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಸಿಎಂ ತಮ್ಮಲ್ಲೇ ಉಳಿಸಿಕೊಳ್ಳಲಿದ್ದು, ಗೃಹ ಖಾತೆ ಬಸವರಾಜ್ ಬೊಮ್ಮಾಯಿ ಬಳಿಯೇ ಉಳಿಯಲಿದೆ.
ಈ ಎರಡೂ ಖಾತೆಗಳನ್ನು ಮಿತ್ರಮಂಡಳಿಗೆ ಹಂಚಿಕೆ ಮಾಡದೆ ಪಕ್ಷದಲ್ಲಿನ ಗೊಂದಲಗಳ ಸೃಷ್ಟಿಗೆ ಬ್ರೇಕ್ ಹಾಕಲು ಸಿಎಂ ಕಸರತ್ತು ನಡೆಸಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಖಾತೆಗಳ ಬಗ್ಗೆ ಮೂಲ ಬಿಜೆಪಿಗರೆ ಕ್ಯಾತೆ ತೆಗೆದಿದ್ದರು. ಆಗಲೂ ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಹಲವು ಖಾತೆಗಳ ಬಗ್ಗೆ ಸಿಎಂ ಮೇಲೆ ಒತ್ತಡವಿತ್ತು. ಮೂಲಗಳ ಪ್ರಕಾರ ಮಿತ್ರಮಂಡಳಿ ಸಚಿವರು ಪ್ರಬಲ ಖಾತೆಗಳಿಗೆ ಹಿಡಿದ ತಮ್ಮ ಪಟ್ಟು ಸಡಿಲಿಸಲು ತಯಾರಿಲ್ಲ. ಹೀಗಾಗಿ ಮಿತ್ರಮಂಡಳಿ ಸಚಿವರ ಬೇಡಿಕೆಗೆ ಸಿಎಂ ಯಡಿಯೂರಪ್ಪ 50:50 ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಅಂದರೆ, ಬಿಕ್ಕಟ್ಟಿಗೆ ಕಾರಣವಾಗಿರುವ ನಾಲ್ಕು ಖಾತೆಗಳ ಪೈಕಿ ಎರಡು ಖಾತೆಗಳನ್ನು ಕೊಡುವುದು ಉಳಿದ ಎರಡನ್ನು ಇಟ್ಟುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ನಾಲ್ಕು ಪ್ರಬಲ ಖಾತೆಗಳ ಪೈಕಿ ಎರಡು ಖಾತೆಗಳು ಮಿತ್ರಮಂಡಳಿಗೆ ಹಂಚಿಕೆ ಮಾಡುವುದು ಖಚಿತವಾಗಿದೆ. ಮುಂದೆ ಸಚಿವ ಸಂಪುಟ ಪುನಾರಚನೆಯಾದಾಗ ಜಲಸಂಪನ್ಮೂಲ ಖಾತೆಯನ್ನು ನಿಮಗೆ ವಹಿಸುತ್ತೇವೆ ಎಂದು ಸಿಎಂ ಯಡಿಯೂರಪ್ಪ, ರಮೇಶ್ ಜಾರಕಿಹೊಳಿ ಅವರನ್ನು ಒಪ್ಪಿಸಲು ಪ್ರಯತ್ನ ಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ರಮೇಶ್ ಜÁರಕಿಹೊಳಿ ಒಪ್ಪಿಲ್ಲ ಎಂದು ತಿಳಿದುಬಂದಿದೆ.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೇರಿದಂತೆ 18 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆಗಲೂ ಕೂಡ ತಮಗೆ ಬೇಕಾದ ಖಾತೆಗಳನ್ನು ಪಡೆಯಲು ಸಚಿವರು ಪೈಪೋಟಿ ಆರಂಭಿಸಿದ್ದರು. ಹಲವರು ಮುನಿಸಿಕೊಂಡಿದ್ದರು. ಆದರೆ ಹೈಕಮಾಂಡ್ ಅಣತಿಯಂತೆ ಖಾತೆಗಳನ್ನು ಯಡಿಯೂರಪ್ಪ ಹಂಚಿಕೆ ಮಾಡಿದ್ದರು.
ಯಾರಿಗೆ ಯಾವ ಖಾತೆ?
1. ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ ಖಾತೆ
2. ಎಸ್.ಟಿ ಸೋಮಶೇಖರ್- ಸಹಕಾರ ಖಾತೆ
3. ಬೈರತಿ ಬಸವರಾಜು- ನಗರಾಭಿವೃದ್ಧಿ ಇಲಾಖೆ
4. ಬಿ.ಸಿ.ಪಾಟೀಲ್- ಅರಣ್ಯ ಇಲಾಖೆ
5. ಆನಂದ್ ಸಿಂಗ್ – ಯುವಜನ, ಕ್ರೀಡಾ, ಕೌಶಲ್ಯಾಭಿವೃದ್ಧಿ ಇಲಾಖೆ
6. ಗೋಪಾಲಯ್ಯ-ಕಾರ್ಮಿಕ ಇಲಾಖೆ
7. ಶಿವರಾಮ್ ಹೆಬ್ಬಾರ್- ಪೌರಾಡಳಿತ ಇಲಾಖೆ
8. ಶ್ರೀಮಂತ ಪಾಟೀಲ್- ತೋಟಗಾರಿಕೆ ಇಲಾಖೆ ಮತ್ತು ಸಕ್ಕರೆ ಖಾತೆ
9. ಡಾ.ಕೆ.ಸುಧಾಕರ್ – ವೈದ್ಯಕೀಯ ಶಿಕ್ಷಣ ಇಲಾಖೆ
10. ನಾರಾಯಣಗೌಡ- ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ