ನವದೆಹಲಿ: ದೇಶದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಹೇರಲಾಗಿರುವ ಲಾಕ್ಡೌನ್ನಿಂದ ಸಾವಿರಾರು ಜೀವಗಳನ್ನು ರಕ್ಷಿಸಲಾಗಿದೆ ಆದರೆ ಕೊರೊನಾ ವೈರಸ್ ಮುಂದಿನಗಳಲ್ಲೂ ಕಂಡು ಬರುವ ಸಾಧ್ಯತೆಯಿದ್ದು, ಮಾಸ್ಕ್ ಜೀವನದ ಒಂದು ಭಾಗವಾಗಿರಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆ ವೇಳೆ ಪ್ರಧಾನಿ ಮೋದಿ ಮಾಸ್ಕ್ ಬಳಕೆಯನ್ನು ಒತ್ತಿ ಹೇಳಿದ್ದಾರೆ.ಸಭೆಯಲ್ಲಿ ಎಲ್ಲ ರಾಜ್ಯದ ಸಿಎಂಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಿರುವ ಪ್ರಧಾನಿ ಮೋದಿ ಕೊರೊನಾ ವಿರುದ್ಧ ನಾವು ಈ ಸಂದರ್ಭದಲ್ಲಿ ಕ್ಷಿಪ್ರವಾಗಿ ಸ್ಪಂದಿಸಬೇಕು ಕೆಂಪು ವಲಯಗಳನ್ನು ಕಿತ್ತಳೆ, ಕಿತ್ತಳೆ ವಲಯವನ್ನು ಹಸಿರು ವಲಯವನ್ನಾಗಿ ಪರಿವರ್ತಿಸಲು ರಾಜ್ಯಗಳು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.ಕೊರೊನಾ ಸಂಕಷ್ಟ ಸಂದರ್ಭದಲ್ಲಿ ನಾವು ಧೈರ್ಯದಿಂದ ಪರಿಸ್ಥಿತಿ ನಡುವೆ ನಿಭಾಯಿಸಬೇಕು. ಜನರಿಗೆ ತಲುಪುವ ಕಾರ್ಯಗಳನ್ನು ಮಾಡಬೇಕು ಆರ್ಥಿಕತೆಯ ಪುನರುಜ್ಜೀವನದ ಜೊತೆಗೆ ಕೊರೊನಾ ವಿರುದ್ಧ ಹೋರಾಟ ಮುಂದುವರಿಸಬೇಕು. ಬೇಸಿಗೆ ಮತ್ತು ಮುಂಗಾರು ಆರಂಭವಾಗಲಿದ್ದು ಈ ನಡುವೆ ಹವಾಮಾನ ಬದಲಾಗಲಿದೆ. ಈ ವೇಳೆ ಹಲವು ರೋಗಗಳು ಉಲ್ಬಣವಾಗಲಿದೆ ಈ ಬಗ್ಗೆ ರಾಜ್ಯ ಸರ್ಕಾರಗಳು ಕಾರ್ಯ ತಂತ್ರಗಳನ್ನು ರೂಪಿಸಬೇಕು ಎಚ್ಚರಿಸಿದರು.
ಇದಲ್ಲದೇ ನಾವು ರಾಜ್ಯಗಳ ನಡುವೆ ತಾರತಮ್ಯ ಮಾಡುವುದಿಲ್ಲ ಹೆಚ್ಚು ಸೋಂಕು ಕಡಿಮೆ ಸೋಂಕಿರುವ ರಾಜ್ಯಗಳಲ್ಲಿ ಶ್ರೇಷ್ಠ ಕನಿಷ್ಠ ಬೇಧ ಭಾವ ಮಾಡುವುದಿಲ್ಲ ಎಲ್ಲ ರಾಜ್ಯಗಳನ್ನು ಕೇಂದ್ರ ಸರ್ಕಾರ ಏಕ ರೂಪದಲ್ಲಿ ನೋಡಲಿದ್ದು ಕೊರೊನಾ ಸಂಕಷ್ಟದಿಂದ ಶೀಘ್ರ ಹೊರ ಬರಲು ಪ್ರಯತ್ನಿಸೋಣ ಎಂದು ಮೋದಿ ಹೇಳಿದರು.