ಬೆಳಗಾವಿ: ಕೈತಪ್ಪುತ್ತಿರುವ ಯೋಜನೆಗಳು ಸೇರಿದಂತೆ ಬೆಳಗಾವಿ ನಗರದ ಜ್ವಲಂತ ಸಮಸ್ಯೆಗಳ ಕುರಿತು ಧ್ವನಿ ಎತ್ತಲು ಫೆಡರೇಶನ್ ಆಫ್ ಅಸೋಸಿಯೇಶನ್ ಆಫ್ ಬೆಳಗಾವಿ (ಎಫ್ಒಎಬಿ) ನಿರ್ಧರಿಸಿದೆ.
ಇಲ್ಲಿಯ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಗುರುವಾರ ಸಂಜೆ ಸೇರಿದ್ದ ಅಸೋಸಿಯೇಶನ್ ಪದಾಧಿಕಾರಿಗಳ ಸಭೆ ಈ ಕುರಿತು ಸುದೀರ್ಘವಾಗಿ ಚರ್ಚಿಸಿತು. ಎಫ್ಒಎಬಿ ಸಂಚಾಲಕ ಚೈತನ್ಯ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಬೆಳಗಾವಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ಚೆಂಬರ್ ಆಫ್ ಕಾಮರ್ಸ್, ಕ್ರೆಡೈ, ಫೌಂಡ್ರಿ ಕ್ಲಸ್ಟರ್, ಇನ್ ಸ್ಟಿಟ್ಟೂಟ್ ಆಫ್ ಎಂಜಿನಿಯರ್ಸ್, ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಶನ್, ಡ್ರಗ್ಗಿಸ್ಟ್ಸ್ ಆಂಡ್ ಕೆಮಿಸ್ಟ್ಸ್ ಅಸೋಸಿಯೇಶನ್, ಪ್ರೊಫೇಶನಲ್ ಫೋರಮ್, ಕ್ಲಾಥ್ ಮರ್ಚಂಟ್ಸ್ ಅಸೋಸಿಯೇಶನ್, ಆಟೋಮೊಬೈಲ್ ಇಂಡಸ್ಟ್ರೀಸ್ ಮೊದಲಾದ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಿಟೀಸ್ 2 ಯೋಜನೆ ಮಂಜೂರಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೈ ತಪ್ಪುವ ಹಂತದಲ್ಲಿರುವ ಕುರಿತು, ರಿಂಗ್ ರಸ್ತೆ 10 ವರ್ಷಗಳಾದರೂ ಪ್ರಗತಿ ಕಾಣದಿರುವ ಕುರಿತು, ಗೋಬರ್ ಧನ್ ಪ್ರೊಜೆಕ್ಟ್ ಜಾರಿಯಾಗದಿರುವ ಕುರಿತು, ಮೂರನೇ ರೈಲ್ವೆ ಗೇಟ್ ವಿಸ್ತರಣೆ ವಿಳಂಬವಾಗುತ್ತಿರುವ ಕುರಿತು, ಧಾರವಾಡ – ಬೆಳಗಾವಿ ರೈಲ್ವೆ ಯೋಜನೆ ವಿಳಂಬ ಕುರಿತು, ವಿಮಾನಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕುರಿತು, ಎಸ್ ಟಿಪಿ ಘಟಕ ಕಾರ್ಯಾರಂಭವಾಗದಿರುವ ಕುರಿತು, ತ್ಯಾಜ್ಯ ವಿಲೇವಾರಿಯಲ್ಲಿನ ಅಸಮರ್ಪಕತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಎಫ್ಒಎಬಿಯ ಮತ್ತೋರ್ವ ಸಂಚಾಲಕ ಎಂ.ಕೆ.ಹೆಗಡೆ ಸಭೆಯಲ್ಲಿ ನಡೆದ ಚರ್ಚೆಗಳನ್ನು ಕ್ರೋಢೀಕರಿಸಿ, ಎಲ್ಲ ವಿಷಯಗಳ ಕುರಿತು ಸಮಗ್ರ ಅಧ್ಯಯನದೊಂದಿಗೆ ಮೇ 14ರಂದು ವಿಸ್ತೃತ ಚರ್ಚೆ ನಡೆಸಿ, ನಂತರ ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸೋಣ ಎಂದು ಪ್ರಕಟಿಸಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಚೈತನ್ಯ ಕುಲಕರ್ಣಿ, ಪ್ರಭಾಕರ ನಾಗರಮುನೋಳಿ, ಪರಾಗ ಭಂಡಾರೆ, ಡಾ. ಎಚ್.ಬಿ. ರಾಜಶೇಖರ, ಎಸ್.ವೈ.ಕುಂದರಗಿ, ಎಂ.ಕೆ.ಹೆಗಡೆ, ಹೇಮೇಂದ್ರ ಪೋರವಾಲ, ರೋಹನ್ ಜುವಳಿ, ಸದಾನಂದ ಹುಂಬರವಾಡಿ, ಸ್ವಪ್ನಿಲ್ ಶಹಾ, ಸಂದೀಪ ಬಾಗೇವಾಡಿ, ಯುವರಾಜ ಹುಲಜಿ, ಸಿ.ಬಿ.ಹಿರೇಮಠ, ಜಿತೇಶ ಕಬ್ಬೂರ, ಎನ್.ಜಿ.ಕುಲಕರ್ಣಿ, ಶರದ ಪಾಟೀಲ, ಎ.ಜೆ.ಕುಂದಪ್, ಬಿ.ಜಿ.ಧರೆಣ್ಣಿ, ಎಸ್.ಎಸ್.ಗಡಿಯಣ್ಣವರ್ ಉಪಸ್ಥಿತರಿದ್ದರು.
Laxmi News 24×7