ಮೂಡಲಗಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ತಾಲೂಕಿನ ಯಾದವಾಡ ಗ್ರಾಮದಲ್ಲಿ ಸೋಮವಾರ ಕೋವಿಡ್-19 ಜಾಗೃತಿ ಸಭೆ ಜರುಗಿತು.
ಮೂಡಲಗಿ ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ ಮಾತನಾಡಿ, “ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿದೆ, ಈಗಾಗಲೇ ಇದರ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೊರೊನಾ ಬಗ್ಗೆ ಸಾರ್ವಜನಿಕರು ಜಾಗೃತಿಯಿಂದ ಇರಬೇಕು. ಆದರೆ ಇದರಿಂದ ಯಾರೂ ಗಾಬರಿಯಾಗಬಾರದು” ಎಂದು ಹೇಳಿದರು.
ಸಕಲ ವ್ಯವಸ್ಥೆ:
“ಸೋಂಕಿತರಿಗೆ ಈಗಾಗಲೇ ಅಗತ್ಯ ಇರುವ ಚಿಕಿತ್ಸೆ ನೀಡಲಾಗುತ್ತಿದೆ. ಶೇ.90ರಷ್ಟು ಆಕ್ಸಿಜನ್ ಸೌಲಭ್ಯ ಕಲ್ಪಿಸಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸೋಂಕಿತರ ಚಿಕಿತ್ಸೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಗಂಭೀರ ಕಾಯಿಲೆಯುಳ್ಳ ಸೋಂಕಿತರನ್ನು ಗೋಕಾಕ ಸಾರ್ವಜನಿಕ ಆಸ್ಪತ್ರೆ, ಮಲ್ಲಾಪೂರ ಪಿ.ಜಿ, ಎಂ.ಡಿ.ಆರ್.ಎಸ್ ಶಾಲೆ ಹಾಗೂ ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರಿಗೆ ಅಗತ್ಯ ಔಷಧೋಪಚಾರ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಅಗತ್ಯ ಬಿದ್ದರೆ ಸೋಂಕಿತರ ಆರೈಕೆಗಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಎಲ್ಲ ರೀತಿಯ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ” ಎಂದು ತಹಶೀಲ್ದಾರ ಭಸ್ಮೆ ತಿಳಿಸಿದರು.
ಹಿರಿಯ ವೈದ್ಯ ಡಾ.ಆರ್.ಎಸ್. ಬೆಂಚಿನಮರಡಿ ಮಾತನಾಡಿ, “ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕವನ್ನು ಹೊಂದಿರುವ ಸೋಂಕಿತರು ಕಡ್ಡಾಯವಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕು. ಅಲ್ಲದೇ ಗುಣ ಲಕ್ಷಣಗಳು ಕಂಡು ಬಂದರೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ವಲಯ ಶಿಕ್ಷಣಾಧಿಕಾರಿ ಎ.ಸಿ. ಮನ್ನಿಕೇರಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಸಿಡಿಪಿಓ ಗುಜನಟ್ಟಿ, ತಾಪಂ ಎಡಿ ಸಂಗಮೇಶ ರೊಡ್ಡನ್ನವರ, ಸಿಪಿಐ ವೆಂಕಟೇಶ ಮುರನಾಳ, ಕಾಮನಕಟ್ಟಿ ಗ್ರಾ.ಪಂ. ಅಧ್ಯಕ್ಷ ಸದಾ ದುರಗನ್ನವರ, ರಾಜುಗೌಡ ಪಾಟೀಲ, ಮಲ್ಲಪ್ಪ ಚೆಕ್ಕನ್ನವರ, ಬಸವರಾಜ ಭೂತಾಳಿ, ಬಸವರಾಜ ಹಿಡಕಲ್ಲ, ಡಾ. ಕವಟಕೊಪ್ಪ, ಮಲ್ಲಪ್ಪ ಮಾಳೇದ, ಕಲ್ಲಪ್ಪ ಗಾಣಗಿ, ಡಾ. ಶಿವನಗೌಡ ಪಾಟೀಲ, ಕುಬೇರ ದಾಸರ, ಯಾದವಾಡ, ಕಾಮನಕಟ್ಟಿ ಗ್ರಾಪಂ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.