ಬೆಳಗಾವಿ:ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕುಪವಾಡದಲ್ಲಿ ಬೆಳಗಾವಿ ಮೂಲದ ಕೇಸರೇಕರ್ ದಂಪತಿ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳಿಗೆ ಮರಣದಂತೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ನಗರದಲ್ಲಿ ಮರಾಠ ಸಮುದಾಯ ಪ್ರತಿಭಟನಾ ರ್ಯಾಲಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಮೂಲದ ಮೋಹನ ಕೇಸರೇಕರ ಹಾಗೂ ಅವರ ಪತ್ನಿ ಮನಿಷಾ ಕೇಸರೇಕರ ಜೀವನೋಪಾಯಕ್ಕಾಗಿ ಸಾಂಗ್ಲಿಯಲ್ಲಿ ನೆಲೆಸಿದ್ದರು. ಕುಪವಾಡದ ಎಂಐಡಿಸಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ಕುಟುಂಬ ಹಾಗೂ ಸಮಾಜದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಿ ಕುಟುಂಬಕ್ಕೆ ನ್ಯಾಯ ನೀಡಬೇಕು.
ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಹಿಸಿ, ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕು. ಶೀಘ್ರ ಆರೋಪಪಟ್ಟಿ ಸಲ್ಲಿಸಿ, ಪ್ರಕರಣವನ್ನು ಫಾಸ್ಟ್ಟ್ರ್ಯಾಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು. ಸೂಕ್ಷ್ಮ ಪ್ರಕರಣವಾಗಿರುವುದರಿಂದ ವಕೀಲ ಹರಶದನಿಂಬಾಳ್ಕರ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕ ಮಾಡಬೇಕು. ಮೃತ ದಂಪತಿಯ ಮಕ್ಕಳಿಗೆ ಸರ್ಕಾರದಿಂದ ಮಾಸಿಕ ಆರ್ಥಿಕ ನೆರವು, ಶಿಕ್ಷಣ ಹಾಗೂ ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗದ ಭರವಸೆ ಕಲ್ಪಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಕೇಸರೇಕರ್ ಕುಟುಂಬಕ್ಕೆ ಬೆಳಗಾವಿ ಜಿಲ್ಲಾಧಿಕಾರಿಗಳು ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಮತ್ತು ಎರಡೂ ರಾಜ್ಯಗಳ ಗೃಹ ಇಲಾಖೆಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಿ ಪ್ರಕರಣದಲ್ಲಿ ನ್ಯಾಯ ದೊರಕಿಸಲು ಕ್ರಮ ಕೈಗೊಳ್ಳಬೇಕು. ಅನಾಥ ಮಕ್ಕಳ ಕಾನೂನುಬದ್ಧ ಹಕ್ಕು, ಶಿಕ್ಷಣ, ಪುನರ್ವಸತಿ ಹಾಗೂ ಭವಿಷ್ಯದ ಭದ್ರತೆಯನ್ನು ಖಚಿತಪಡಿಸಬೇಕು ಎಂದು ಸಮಸ್ತ ಮರಾಠಾ ಸಮುದಾಯದ ಮುಖಂಡರು ವಿನಂತಿಸಿದರು.
ರಮಾಕಾಂತ ಕುಂಡಸ್ಕರ್, ಮಾಲುಜಾ ಅಷ್ಟೇಕರ್, ಸರಿತಾ ಪಾಟೀಲ, ರೇಣು ಕಿಲ್ಲೇಕರ್, ಸಂಜಯ ಶಿಂಧೆ, ದಿಗಂಬರ ಪವಾರ್, ದತ್ತ ಜಾಧವ, ಆನಂದ ಅಪ್ಟೇಕರ್, ಭರತ ಪಾಟೀಲ, ಶ್ರೀಕಾಂತ ಕುರಿಹಾಳಕರ್, ರಾಜೇಂದ್ರ ಬೈಲೂರ, ಸಾಗರ ಪಾಟೀಲ, ಚಂದ್ರಕಾಂತ ಕುಂಡಸ್ಕರ್ ಇತರರಿದ್ದರು.
Laxmi News 24×7