ಬೆಳಗಾವಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರತಿಷ್ಠಿತ ಚುನಾವಣೆಯಾಗಿ ಮಾರ್ಪಟ್ಟಿದೆ. ಎಂಇಎಸ್ ನಾಯಕನಿಗೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದ ಬಿಜೆಪಿ ನಾಯಕರಿಗೆ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಶಾಕ್ ನೀಡಿದ್ದಾರೆ.
ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರತಿಸ್ಪರ್ಧಿ ಎಂಇಎಸ್ ನಾಯಕ ಅರವಿಂದ ಪಾಟೀಲ ಅವರಿಗೆ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕರು ಬೆಂಬಲ ಸೂಚಿಸಿದ್ದರು. ಬಹಿರಂಗವಾಗಿಯೇ ಹೇಳಿಕೆ ನೀಡಿದ ನಾಯಕರು ಅರವಿಂಧ ಗೆಲ್ಲಿಸುವ ಪ್ರಯತ್ನ ನಡೆಸಿದ್ದರು.
ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಚಿವ ರಮೇಶ ಜಾರಕಿಹೊಳಿ, ಶಾಸಕ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಸಚಿವೆ ಶಶಿಕಲಾ ಜೊಲ್ಲೆ ಸೇರಿ ಜಿಲ್ಲೆಯ ಎಲ್ಲ ಬಿಜೆಪಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿ, ಅವಿರೋಧ ಆಯ್ಕೆ ಮಾಡಲು ಪ್ರಯತ್ನಿಸಿದರು. ಅವಿರೋಧ ಆಯ್ಕೆ ಪ್ರಯತ್ನ ವಿಫಲವಾದ ಹಿನ್ನೆಲೆ ಚುನಾವಣೆಗೆ ಎದುರಿಸಲು ಸಿದ್ದರಾಗಿದ್ದರು. ಆದರೆ ಖಾನಾಪುರ ಶಾಸಕಿ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಒಟ್ಟು 50 ಡಿಸಿಸಿ ಬ್ಯಾಂಕ್ ಸದಸ್ಯರು ಮತದಾನ ಹಕ್ಕು ಹೊಂದಿರುವವ ಖಾನಾಪುರ ಮತದಾರರ ಪೈಕಿ 28 ಜನರನ್ನು ಮಹಾರಾಷ್ಟ್ರದ ಖಾಸಗಿ ರೆಸಾರ್ಟ್ ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಮತದಾರರು ಮತದಾನದ ದಿನವೇ ನೇರವಾಗಿ ಮತಗಟ್ಟೆಗೆ ಆಗಮಸಿ ಮತ ಚಲಾವಣೆ ಮಾಡಲಿದ್ದಾರೆ. ಇನ್ನೂ 22 ಜನ ಮತದಾರರನ್ನು ಅಂಜಲಿ ನಿಂಬಾಳ್ಕರ್ ರಹಸ್ಯ ಜಾಗದಲ್ಲಿ ಇರಿಸಿದ್ದಾರೆ.
ಮಾಜಿ ಶಾಸಕ ಅರವಿಂದ ಪಾಟೀಲ ಅವರ ಪರ ಮತದಾನ ಮಾಡುವ ಇನ್ನೂ ನಾಲ್ವರನ್ನು ತರಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಎಂಇಎಸ್ ಮುಖಂಡ ಅರವಿಂದ ಪಾಟೀಲ ಅವರಿಗೆ ಬಿಜೆಪಿ ಬೆಂಬಲ ನೀಡುವ ಮೂಲಕ ಗೆಲುವು ಸಾಧಿಸಬೇಕು ಎಂಬ ಲೆಕ್ಕಾಚಾರ ಬುಡ ಮೇಲಾಗಿದೆ.