ಮೈಸೂರು: ಶುಕ್ರವಾರ ನಡೆಯಲಿರುವ ದಸರಾ ಜಂಬೂಸವಾರಿ ಮೆರವಣಿಗೆ ಹಿನ್ನೆಲೆಯಲ್ಲಿ ಇಂದು ಮೈಸೂರು ಅರಮನೆ ಆವರಣದಲ್ಲಿ ಜಂಬೂಸವಾರಿಯ ತಾಲೀಮು ನಡೆಸಲಾಯಿತು. ದಸರಾ ಗಜಪಡೆ, ಅಶ್ವಪಡೆ ಹಾಗೂ ಪೊಲೀಸ್ ತುಕಡಿಗಳಿಂದ ತಾಲೀಮಿನಲ್ಲಿ ಭಾಗಿಯಾಗಿದ್ದವು.
ತಾಲೀಮು ನಡೆಸುವ ವೇಳೆ ಪೊಲೀಸ್ ಬ್ಯಾಂಡ್ ವಾದನಕ್ಕೆ ಗಜಪಡೆ ಹಾಗೂ ಅಶ್ವಪಡೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದವು. ಗಜಪಡೆ ಕ್ಯಾಪ್ಟನ್ ಅಭಿಮನ್ಯು ಅಕ್ಕಪಕ್ಕದಲ್ಲಿ ಕಾವೇರಿ ಹಾಗೂ ಚೈತ್ರ ಆನೆಗಳು ಮೆರವಣಿಗೆಯ ತಾಲೀಮು ನಡೆಸಿದವು.
ದಸರಾ ಜಂಬೂಸವಾರಿ ಮೆರವಣಿಗೆಯ ತಾಲೀಮಿನಲ್ಲಿ ಅಶ್ವಪಡೆಯ 30 ಕುದುರೆಗಳು, 2 ಪೊಲೀಸ್ ತುಕಡಿ ಭಾಗವಹಿಸಿದ್ದವು. ಜಂಬೂಸವಾರಿ ದಿನ ಆರು ಸ್ತಬ್ಧಚಿತ್ರಗಳು, 8 ಕಲಾ ತಂಡಗಳು ಮೆರವಣಿಗೆಗೆ ಸಾಥ್ ನೀಡಲಿವೆ.
ತಾಲೀಮು ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ವಂದನೆ ಸ್ವೀಕರಿಸಿದರು. ಸಿಎಆರ್ ಡಿಸಿಪಿ ಶಿವರಾಜ್, ಡಿಸಿಎಫ್ ಡಾ.ವಿ.ಕರಿಕಾಳನ್ ಮತ್ತಿತರರು ಉಪಸ್ಥಿತರಿದ್ದರು.