ಚಾಮರಾಜನಗರ: ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ತಪ್ಪಲಲ್ಲಿ ನೆಲೆಸಿರುವ ಮಾದಪ್ಪನ ದೇಗುಲವನ್ನು ಬಂದ್ ಮಾಡುವಂತೆ ಆಗ್ರಹಿಸಿ ನೂರಾರು ಜನರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಮಲೆ ಮಹದೇಶ್ವರ ಸ್ವಾಮಿ ಸನ್ನಿಧಿಗೆ ದಿನನಿತ್ಯ ಭೇಟಿ ನೀಡುವವರ ಸಂಖ್ಯೆ ಸಾವಿರಾರು. ಕರೊನಾ ಭೀತಿಯ ನಡುವೆಯೂ ರಾಜ್ಯ ಮತ್ತು ತಮಿಳುನಾಡು ಭಾಗದಿಂದ ಮಾದಪ್ಪನ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಲೇ ಇದ್ದಾರೆ. ಪರಿಣಾಮ ಸ್ಥಳೀಯರಲ್ಲೂ ಸೋಂಕಿನ ಛಾಯೆ ಆವರಿಸಿದೆ. ಹಾಗಾಗಿ ಎಲ್ಲೆಡೆ ಕರೊನಾ ನಿಯಂತ್ರಣಕ್ಕೆ ಬರುವವರೆಗೂ ಹೊರಗಿನವರಿಗೆ ಪ್ರವೇಶ ನೀಡಬಾರದು ಎಂದು ಪಟ್ಟುಹಿಡಿದು ಗುರುವಾರ ರಸ್ತೆಯಲ್ಲಿ ಕುಳಿತ ನೂರಾರು ಜನರು ಕೆಲಕಾಲ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಬೆಟ್ಟದಲ್ಲಿ ದೇವಾಲಯ ಪ್ರವೇಶ ಮಾಡುವಾಗ ಮಾತ್ರ ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ.
ಆದರೆ ಕೆಲ ಭಕ್ತರು ಆವರಣದಲ್ಲಿ ಮನಸೋ ಇಚ್ಛೆ ಓಡಾಡುತ್ತಾರೆ. ಹಾಗಾಗಿ ಸ್ಥಳೀಯರಿಗೂ ಸೋಂಕಿನ ಭೀತಿ ಕಾಡುತ್ತಿದೆ. ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದುವರೆಗೂ ಬೆಟ್ಟದಲ್ಲಿ ಒಂದೇಒಂದು ಕರೊನಾ ಪ್ರಕರಣ ಪತ್ತೆಯಾಗಿಲ್ಲ. ಈ ಭಾಗದವರಿಗೆ ಇದೇ ಸಮಾಧಾನಕರ. ಇದನ್ನು ಹೊರಗಿನವರು ಬಂದು ಹಾಳು ಮಾಡುವುದು ಬೇಡ. ಮುನ್ನೆಚ್ಚರಿಕೆ ಕ್ರಮವಾಗಿ ದೇವಸ್ಥಾನದ ಬಾಗಿಲನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.