ಮೈಸೂರು: ಹಲವು ದಿನಗಳ ಬಳಿಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನನ್ನ ಜತೆ ಫೋನ್ನಲ್ಲಿ ಚರ್ಚೆ ಮಾಡಿದ್ದಾರೆ. 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡಿ ಎಂದು ದೂರವಾಣಿಯ ಮೂಲಕ ಅವರು ನನಗೆ ತಿಳಿಸಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ನಾನು ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳಿಗೆ ಪಕ್ಷದಿಂದ ಬೆಂಬಲಿಗರನ್ನು ನಿಲ್ಲಿಸಬೇಕೋ, ಅಥವಾ ಪಕ್ಷೇತರವಾಗಿ ನಿಲ್ಲಿಸಬೇಕೋ ಎಂಬುದನ್ನು ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇನೆ. ಈಬಗ್ಗೆ ಮುಂದಿನ ವಾರದಿಂದ ಕ್ಷೇತ್ರ ಪ್ರವಾಸ ಕೈಗೊಳ್ಳುವೆ. 2008ರಲ್ಲಿ ಹುಣಸೂರಿನಲ್ಲಿ ಸೋಲಿನ ಅನುಭವ ಇದೆ. ಮತದಾರರ ಅಭಿಪ್ರಾಯ ಕೇಳದೆ 2008ರಲ್ಲಿ ಸೋತಿದ್ದೇನೆ. ಮತದಾರರನ್ನು ಬಿಟ್ಟು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಮತದಾರರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡುವೆ ಎಂದು ಅವರು ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ನಡೆಗಳ ಬಗ್ಗೆ ಸುಳಿವು ನೀಡಿದರು.
ಡ್ಯಾಂ ಬಿರುಕು ಬಿಟ್ಟಿದೆ ಅಂತ ಸುಮಲತಾ ಆರೋಪ ಮಾಡಿದ್ದರು. ಅದನ್ನು ಇಷ್ಟು ಬೆಳೆಸುವ ಅಗತ್ಯ ಇರಲಿಲ್ಲ. ಆ ವಿಚಾರ ಮಾತನಾಡಿದರೆ ಸಂಸದೆ ಸುಮಲತಾಗೂ ಡ್ಯಾಮೇಜ್ ಆಗುತ್ತದೆ. ಮಾತಾಡುವುದರಿಂದಲೇ ಲೀಡರ್ ಆಗುತ್ತೇವೆ ಎಂದರೆ ತಪ್ಪಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಎರಡೂ ಕಡೆಯಿಂದ ವೈಯಕ್ತಿಕ ವಿಚಾರಗಳ ಚರ್ಚೆ ನಡೆಯುತ್ತಿದೆ. ಸದ್ಯಕ್ಕೆ ಇಬ್ಬರೂ ಚರ್ಚೆ ನಿಲ್ಲಿಸಿದ್ದಾರೆ. ಇಲ್ಲಿಗೇ ನಿಲ್ಲಿಸೋದು ಒಳ್ಳೆಯದು. ಇಲ್ಲದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತೆ. ಒಬ್ಬರ ಪರ ಹೆಚ್ಚು ಜನ ಇರಬಹುದು. ಮತ್ತೊಬ್ಬರ ಪರ ಕಡಿಮೆ ಜನ ಇರಬಹುದು. ಆದರೆ ಜನ ರೊಚ್ಚಿಗೆದ್ದರೆ ಸಮಸ್ಯೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.