ರಾಮನಗರ: ಜಿಲ್ಲೆಯ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ಕೃಷಿ ಭೂಮಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ತಮ್ಮ ಜಮೀನಿನಲ್ಲಿ ಇಸ್ರೇಲ್ ಮಾದರಿ ಕುರಿ ಸಾಕಾಣಿಕೆ ಆರಂಭ ಮಾಡಿದ್ದು, ಆ ಮೂಲಕ ಪ್ರಗತಿ ಪರ ರೈನತನಾಗಿ ಇತರರಿಗೂ ಮಾದರಿಯಾಗುವ ಕಾರ್ಯವನ್ನು ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಕೃಷಿ ಚಟುವಟಿಕೆಗಳಿಗಾಗಿ ಹೊಸ ಟ್ರ್ಯಾಕ್ಟರ್ ಖರೀದಿಸಿದ್ದ ಕುಮಾರಸ್ವಾಮಿ ಅವರು, ಸದ್ಯ ಬಿಡದಿಯ ತೋಟದಲ್ಲಿ ಕುರಿ ಸಾಕಾಣಿಕೆಗೆ ಅತ್ಯಾಧುನಿಕವಾಗಿ ಇಸ್ರೇಲ್ ಮಾದರಿಯಲ್ಲಿ ಕುರಿ ಸಾಕಾಣಿಕೆ ಆರಂಭಿಸಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುರಿ ಸಾಕಾಣಿಕೆಗಾಗಿ ಸುಸಜ್ಜಿತವಾದ ಶೆಡ್ ನ್ನ ನಿರ್ಮಿಸಿರುವ ಮಾಜಿ ಸಿಎಂ, ಇತ್ತೀಚೆಗೆ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಈ ಕುರಿತು ಕೆಲ ದಿನಗಳ ಹಿಂದೆ ಜೆ.ಪಿ ಭವನದಲ್ಲಿ ಮಾತನಾಡಿದ್ದ ಹೆಚ್ಡಿಕೆ, ಬಿಡದಿಯ ತೋಟದ ಮನೆಯೇ ನನ್ನ ಖಾಯಂ ಆಸ್ತಿ. ಬದುಕಿರುವವರೆಗೂ ಇದೇ ನನ್ನ ಆಸ್ತಿ. ನಾನೀಗ ಬಿಡದಿ ತೋಟದ ಮನೆಯಲ್ಲಿಯೇ ಇದ್ದೇನೆ. ಯಾವುದೇ ವೆಸ್ಟ್ ಯಂಡ್ ಇಲ್ಲ, ರೈಟ್ ಯಂಡ್ ಇಲ್ಲ. ಈಗ ಯಾರೂ ದೂರಲು ಆಗುವುದಿಲ್ಲ. ಎಂದಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಆರೂವರೆ ಕೋಟಿ ಜನರ ವಿಶ್ವಾಸ ಗಳಿಸುತ್ತೇನೆ. ರೈತರು ಬದುಕಲು ಹೇಗೆ ಸಾಧ್ಯ ಎಂಬುದನ್ನು ನನ್ನ ತೋಟದಲ್ಲಿ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದರು.