ತುಮಕೂರು: ‘ಮಾಜಿ ಸಿಎಂ ಸಿದ್ದರಾಮಯ್ಯನವರೇ ಬೇಕಾದರೆ ಬಿಜೆಪಿಗೆ ಬರಲಿ’ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ ಮಾಧುಸ್ವಾಮಿ ಆಹ್ವಾನ ನೀಡಿದ್ದಾರೆ. ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಯಾರು ಬೇಕಾದರೂ ಕಾಂಗ್ರೆಸ್ಗೆ ಬರಬಹುದು, ಬಿಜೆಪಿಗೆ ಹೋದ 17 ಮಂದಿಗೂ ಸ್ವಾಗತ ಎಂದಿದ್ದರು. ಈಗ ಡಿ.ಕೆ ಶಿವಕುಮಾರ್ ಹೇಳಿಕೆಗೆ ಹಲವು ಬಿಜೆಪಿ ನಾಯಕರು ಪ್ರತಿಕ್ರಿಯಿಸುತ್ತಿದ್ದಾರೆ. ಸದ್ಯ ಸಚಿವ ಜೆ.ಸಿ ಮಾಧುಸ್ವಾಮಿ ಕೂಡ ಡಿಕೆಶಿಗೆ ಟಾಂಗ್ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತಾಡಿದ ಸಚಿವ ಜೆ.ಸಿ ಮಾಧುಸ್ವಾಮಿ, ಕಾಂಗ್ರೆಸ್ಗೆ ನನ್ನ ಯಾರೂ ಕರೆದಿಲ್ಲ. ಮುಳುಗುತ್ತಿರುವ ಕಾಂಗ್ರೆಸ್ಗೆ ಹೋಗುವಂತ ಪರಿಸ್ಥಿತಿ ಇನ್ನೂ ನನಗೆ ಬಂದಿಲ್ಲ. ಸಿದ್ದರಾಮಯ್ಯನವರೇ ಬೇಕಾದರೆ ಬಿಜೆಪಿಗೆ ಬರಲಿ, ಚಿಕ್ಕನಾಯಕನಹಳ್ಳಿಯಲ್ಲೂ ಸ್ಪರ್ಧಿಸಲಿ. ಸಿದ್ದರಾಮಯ್ಯ ನಮ್ಮ ಕ್ಷೇತ್ರದಲ್ಲಿ ನಾನು ಸಂತೋಷ ಪಡ್ತೀನಿ ಎಂದರು.
ಹೀಗೆ ಮುಂದುವರಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಕೂಡ ತುಮಕೂರಿನ್ಲೇ ಸ್ಪರ್ಧಿಸಿ ಸೋತರು. ಈಗ ಸಿದ್ದರಾಮಯ್ಯ ನನ್ನ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಅದೇ ಗತಿ. ನಾನು 23 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ರಾಜಕಾರಣದಲ್ಲಿ ಯಾರೇ ನಿಂತರು ಎದುರಿಸಬೇಕು. ಸಿದ್ದರಾಮಯ್ಯ ಬಂದು ನಿಂತರೂ ಎದುರಿಸುತ್ತೇನೆ ಎಂದೇಳಿದರು.
ಬಿಜೆಪಿಗೆ ಯಾರು ಬೇಕಾದರೂ ಬರಲಿ. ಸಿದ್ದರಾಮಯ್ಯ ಬಂದರೆ ಬರಬೇಡಿ ಎನ್ನಲಾಗುವುದೇ. ಬಿಜೆಪಿಯ ಬಾಗಿಲು ಎಲ್ಲರಿಗೂ ಯಾವಾಗಲೂ ತೆರೆದಿರುತ್ತದೆ ಎನ್ನುವ ಮೂಲಕ ಡಿಕೆಶಿ ಹೇಳಿಕೆಗೆ ಮಾಧುಸ್ವಾಮಿ ಪರೋಕ್ಷ ತಿರುಗೇಟು ನೀಡಿದರು.