ವಿಜಯಪುರ: ಪುಲ್ವಾಮಾದಲ್ಲಿ ಎರಡು ದಿನಗಳ ಹಿಂದೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರನ್ನು ಹೊಡೆದುರುಳಿಸುತ್ತಲೇ ಹುತಾತ್ಮನಾದ ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶೀರಾಯ ಬೊಮ್ಮನಹಳ್ಳಿ(35) ಅವರ ಅಂತ್ಯಕ್ರಿಯೆಯನ್ನು ಇಂದು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
ಉಕ್ಕಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಾರ್ವಜನಿಕರ ದರ್ಶನ ಅಂತ್ಯದ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ದರ್ಶನದ ಬಳಿಕ ಉಕ್ಕಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಸರ್ಕಾರಿ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸೇನೆಯಿಂದ ಅಂತಿಮ ನಮನ ಸಲ್ಲಿಸಲಾಯಿತು.
15 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಕಾಶೀರಾಯ ಅವರು ತಂದೆ, ತಾಯಿ, ಪತ್ನಿ, ಓರ್ವ ಗಂಡು ಮಗು, ಓರ್ವ ಹೆಣ್ಣು ಮಗು ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ. ಊರಿಗೆ ಬಂದಾಗ ಮಗ ಹೇಳಿದ್ದ ಮಾತನ್ನು ಈ ಸಂದರ್ಭದಲ್ಲಿ ಅವರ ತಂದೆ ಶಂಕ್ರಪ್ಪ ನೆನೆದು ಕಣ್ಣೀರು ಹಾಕಿದರು. ಊರಿಗೆ ಬಂದಾಗಲೂ ಉಗ್ರರ ಬಗ್ಗೆ ಮಾತನಾಡುತ್ತಿದ್ದ. ಅವರನ್ನು ಸುಮ್ಮನೇ ಬಿಡೋಲ್ಲ ಹೊಡೆದು ಬಿಸಾಕ್ತೀನಿ, ನಾನು ಹಾಗೇ ಸಾಯೊಲ್ಲ, ಉಗ್ರರನ್ನ ಹೊಡೆದೇ ಸಾಯುತ್ತೇನೆ ಎನ್ನುತ್ತಿದ್ದ. ಕೊನೆಗೂ ಮಾತನ್ನು ನಡೆಸಿದ. ಮೂವರು ಉಗ್ರರನ್ನ ಹೊಡೆದು ಹುತಾತ್ಮನಾದ ಎಂದು ಕಣ್ಣೀರಿಟ್ಟರು.
ಇವರ ದೇಶಪ್ರೇಮ ಎಷ್ಟಿತ್ತು ಎಂದರೆ ತಮ್ಮ ಮಗನಿಗೆ ಭಗತ್ಸಿಂಗ್ ಎಂದು ಹೆಸರಿಟ್ಟಿದ್ದಾರೆ. ಊರಿಗೆ ಬಂದಾಗ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸುತ್ತಿದ್ದ ಎಂದು ಅವರ ದೇಶಭಕ್ತಿ ನೆನೆದು ಕಣ್ಣೀರು ಹಾಕಿದರು ಕುಟುಂಬಸ್ಥರು.
ವೀರಯೋಧನಿಗೆ ಅಂತಿಮ ನಮನದ ಕ್ಷಣಗಳು:
VIDEO CREDITS TO VIJAYVANI
ಪುಲ್ವಾಮಾದಲ್ಲಿ ಎರಡು ದಿನಗಳ ಹಿಂದೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರನ್ನು ಹೊಡೆದುರುಳಿಸುತ್ತಲೇ ಹುತಾತ್ಮನಾದ ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಯೋಧ ಕಾಶೀರಾಯ ಬೊಮ್ಮನಹಳ್ಳಿ ಅವರ ಅಂತ್ಯಕ್ರಿಯೆಯನ್ನು ಇಂದು ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. pic.twitter.com/2CO5HrdCPV
— Vijayavani (@VVani4U) July 4, 2021