ಮೈಸೂರು: ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಶುಕ್ರವಾರ, ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ವಿಶೇಷ ವಿಮಾನದಲ್ಲಿ ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ಅವರು ನೇರವಾಗಿ ಮಠಕ್ಕೆ ತೆರಳಿದರು. ಸಹೋದರ ಲಖನ್ ಜಾರಕಿಹೊಳಿ ಜತೆಗಿದ್ದರು.
ಮಠಕ್ಕೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ‘ಸ್ವಾಮೀಜಿ ಅವರ ಪೂರ್ವಾಶ್ರಮದ ತಾಯಿ ಈಚೆಗೆ ನಿಧನರಾಗಿದ್ದು, ಸೌಜನ್ಯದ ಭೇಟಿಗೆ ಬಂದಿದ್ದೇನೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ’ ಎಂದರು.
‘ಮುಂಬೈಗೆ ಭೇಟಿ ನೀಡಿದ್ದರ ಹಿಂದೆ ರಾಜಕೀಯ ಉದ್ದೇಶ ಇದ್ದಿರಬಹುದು. ಆದರೆ ಮಠದ ಭೇಟಿಯ ಹಿಂದೆ ಅಂತಹ ಯಾವುದೇ ಉದ್ದೇಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಸ್ವಾಮೀಜಿ ಭೇಟಿಯ ಬಳಿಕ ರಾಜೀನಾಮೆ ನಿರ್ಧಾರ ಪ್ರಕಟಿಸುತ್ತಾರೆ ಎಂಬ ಊಹಾಪೋಹದ ಬಗ್ಗೆ ಪ್ರತಿಕ್ರಿಯಿಸಿ, ‘ಅದು ಈಗ ಹೇಳಲ್ಲ. ರಾಜೀನಾಮೆ ನೀಡುವ ವಿಚಾರ ಮುಂಬೈನಲ್ಲಿ ತೀರ್ಮಾನ ಆಗಲಿದೆ’ ಎಂದರು.