ಬೆಳಗಾವಿ: ಗೋವಾದಿಂದ ಅಕ್ರಮವಾಗಿ ಕ್ಯಾಂಟರ್ನಲ್ಲಿ ಸಾಗಿಸುತ್ತಿದ್ದ 1,440 ಲೀಟರ್ ಮದ್ಯದ ಬಾಟಲಿಗಳನ್ನು ಇಲ್ಲಿನ ಸಿಸಿಐಬಿ ಪೊಲೀಸರು ತಾಲ್ಲೂಕಿನ ಹೊನಗಾ ಹೊರವಲಯದ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ವಶಕ್ಕೆ ಪಡೆದು, ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ.
ಬೈಲಹೊಂಗಲ ತಾಲ್ಲೂಕು ಸಂಗೊಳ್ಳಿಯ ಸಿದ್ಧಾರೂಡ ಪಟಾತ (24) ಬಂಧಿತ. ಇನ್ನೊಬ್ಬ ಆರೋಪಿ ಕಣಬರ್ಗಿಯ ಶಂಕರ ದೇಸನೂರ (38) ಪರಾರಿಯಾಗಿದ್ದಾರೆ.
ಗೋವಾ ರಾಜ್ಯದಲ್ಲಿ ಮಾತ್ರವೇ ಮಾರಬೇಕಿರುವ ವಿಸ್ಕಿ, ರಮ್ ಹಾಗೂ ಬ್ರಾಂಡಿ ಬಾಟಲಿಗಳು ಅವಾಗಿವೆ. ಕ್ಯಾಂಟರ್ ಅನ್ನೂ ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹ 20 ಲಕ್ಷ ಆಗುತ್ತದೆ. ಬಾಟಲಿಗಳನ್ನು (67 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಅಬಕಾರಿ ಕಾಯ್ದೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ-2020ರ ಅಡಿಯಲ್ಲಿ ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಡಿಸಿಪಿಗಳಾದ ವಿಕ್ರಂ ಅಮಟೆ ಹಾಗೂ ಚಂದ್ರಶೇಖರ ನೀಲಗಾರ, ಅಪರಾಧ ವಿಭಾಗದ ಎಸಿಪಿ ನಾರಾಯಣ ಭರಮನಿ ಮಾರ್ಗದರ್ಶನದಲ್ಲಿ ಸಿಸಿಐಬಿ ಘಟಕದ ಇನ್ಸ್ಪೆಕ್ಟರ್ ಸಂಜೀವ ಕಾಂಬಳೆ ನೇತೃತ್ವದಲ್ಲಿ ಎಎಸ್ಐ ಬಿ.ಆರ್. ಮುತ್ನಾಳ, ಎ.ಕೆ. ಕಾಂಬಳೆ, ಬಿ.ಎನ್. ಬಳಬನ್ನವರ, ಎಸ್.ಸಿ. ಕೋರೆ, ಎಸ್.ಎಸ್. ಪಾಟೀಲ, ಸಿ.ಜೆ. ಚಿನ್ನಪ್ಪಗೋಳ, ಎಂ.ಎಂ. ವಡೆಯರ ಈ ದಾಳಿ ನಡೆಸಿದ್ದಾರೆ.