ಭೋಪಾಲ್: ತನ್ನ ಕೈಯಾರೆ ಶೌಚಾಲಯ ಶುಚಿಗೊಳಿಸುವ ಮೂಲಕ ಮಧ್ಯಪ್ರದೇಶದ ಸಚಿವ ಪ್ರಧುಮಾನ್ ಸಿಂಗ್ ತೋಮರ್ ಭಾರೀ ಸುದ್ದಿಯಾಗಿದ್ದು, ಸದ್ಯ ಅವರಿಗೆ ಪ್ರಶಂಸೆಗಳ ಸುರಿಮಳೆಯೇ ಬರುತ್ತಿದೆ.
ಹೌದು. ಸಚಿವರಿಗೆ ಗ್ವಾಲಿಯರ್ನ ಆಯುಕ್ತರ ಕಚೇರಿಯ ಸಾರ್ವಜನಿಕ ಶೌಚಾಲಯ ದುರ್ನಾತ ಬೀರುತ್ತಿದೆ ಎಂದು ಕೆಲ ಮಹಿಳೆಯರು ದೂರು ನಿಡಿದ್ದರು. ಈ ಹಿನ್ನೆಲೆಯಲ್ಲಿ ಪರಶೀಲನೆ ನಡೆಸಲೆಂದು ಸಚಿವರು ತೆರಳಿದ್ದರು. ಈ ವೇಳೆ ಶೌಚಾಲಯ ಗಲೀಜಾಗಿರುವುದು ಕಂಡು ಬಂದಿದೆ.ಈ ವೇಳೆ ಸಮಯ ವ್ಯರ್ಥ ಮಾಡದ ಸಚಿವರು ಕೂಡಲೇ ಟಾಯ್ಲೆಟ್ ಕ್ಲೀನರ್, ಬ್ರಶ್ ಇತ್ಯಾದಿಗಳನ್ನು ತಂದುಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾನೇ ತನ್ನ ಕೈಯಾರೆ ಶೌಚಾಲಯ ಕ್ಲೀನ್ ಮಾಡಲು ಆರಂಭಿಸಿದರು. ಅಲ್ಲದೆ ಸರ್ಕಾರಿ ಕಚೇರಿಗಳಲ್ಲಿನ ಶೌಚಾಲಯಗಳನ್ನು ಶುಚಿಯಾಗಿಡುವ ಜವಾಬ್ದಾರಿಯನ್ನು ಅಲ್ಲಿನ ನೌಕರರೇ ತೆಗೆದುಕೊಳ್ಳಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಕೊಳಕಾಗಿರುವ ಶೌಚಾಲಯ ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ತೀವ್ರ ತೊಂದರೆ ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡ ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು. ಅಲ್ಲದೆ ಪ್ರತಿ ದಿನ ಶೌಚಾಲಯಗಳನ್ನು ಶುಚಿಗೊಳಿಸಬೇಕು ಎಂದು ಅವರು ತಿಳಿಸಿದರು.