ಚಿಕ್ಕೋಡಿ/ಬೆಳಗಾವಿ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಸಚಿವರು ಹಾಗೂ ಅಧಿಕಾರಿಗಳು ಸೆಲ್ಫ್ ಕ್ವಾರಂಟೈನ್ ಆಗುತ್ತಿದ್ದಾರೆ. ಆದರೆ ಸಿಎಂ ಭೇಟಿ ಬಳಿಕ ಸೆಲ್ಫ್ ಕ್ವಾರಂಟೈನ್ ಆಗದ ಡಿಸಿಎಂ ಲಕ್ಷ್ಮಣ ಸವದಿ ನೂರಾರು ಜನರನ್ನ ಸೇರಿಸಿ ಆರ್ಟಿಓ ಕಚೇರಿ ಉದ್ಘಾಟಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.
ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಂಜೂರಾದ ನೂತನ ಆರ್ಟಿಓ ಕಚೇರಿ ಉದ್ಘಾಟನಾ ಸಮಾರಂಭ ನಡೆದಿದೆ. ಸಮಾರಂಭದಲ್ಲಿ 250ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವ ಶ್ರೀಮಂತ ಪಾಟೀಲ್ ಸಮಾರಂಭದಲ್ಲಿ ಸಾಮಾಜಿಕ ಅಂತರ ಮರೆತು ಕಚೇರಿ ಉದ್ಘಾಟಿಸಿದ್ದಾರೆ.
ಅಲ್ಲದೇ ಬಿಜೆಪಿ ಶಾಸಕರಾದ ಮಹೇಶ್ ಕುಮಟಳ್ಳಿ ಹಾಗೂ ಪಿ.ರಾಜೀವ್ ಕೂಡ ಸಮಾರಂಭದಲ್ಲಿ ಸಾಮಾಜಿಕ ಅಂತರ ಮರೆತು ಭಾಗಿಯಾಗಿದ್ದರು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ನಿಯಮಗಳನ್ನ ಮಾಡಿದೆ. ಆದರೆ ಈಗ ಅಥಣಿ ಪಟ್ಟಣದಲ್ಲಿ ನಡೆದ ಸಮಾರಂಭವನ್ನು ನೋಡಿ, ಜನರಿಗೊಂದು ನ್ಯಾಯನಾ? ಜನಪ್ರತಿನಿಧಿಗಳಿಗೆ ಒಂದು ನ್ಯಾಯನಾ? ಎಂಬ ಮಾತು ಕೇಳಿ ಬಂದಿದೆ
ಸಾಮಾನ್ಯ ಜನರ ಸಭೆ ಸಮಾರಂಭಗಳಿಗೆ ಅನ್ವಯಿಸುವ ನಿಯಮಗಳು ಜನಪ್ರತಿನಿಧಗಳಿಗೆ ಏಕೆ ಇಲ್ಲ? ಕೋವಿಡ್ ಸೊಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಆರ್ಟಿಓ ಕಚೇರಿ ಉದ್ಘಾಟನೆ ಬೇಕಿತ್ತಾ ಎಂದು ಡಿಸಿಎಂ ಲಕ್ಷ್ಮಣ ಸವದಿಯನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.