XMINEWSಬೆಂಗಳೂರು: ಸಾಲುಮರದ ತಿಮ್ಮಕ್ಕ ಅವರಿಗೆ ಸಿಕ್ಕಿರುವ ಪುರಸ್ಕಾರಗಳ ವಸ್ತು ಸಂಗ್ರಹಾಲಯ (ಮ್ಯೂಸಿಯಂ) ಸ್ಥಾಪಿಸಲು ಸಾಗರೋತ್ತರ ಕನ್ನಡಿಗರ ಒಕ್ಕೂಟ ಮುಂದೆ ಬಂದಿದೆ.
ಪರಿಸರ ದಿನಾಚರಣೆ ಅಂಗವಾಗಿ ಸಾಗರೋತ್ತರ ಕನ್ನಡಿಗರು ಆಯೋಜಿಸಿದ್ದ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ತಿಮ್ಮಕ್ಕ ಅವರ ಮನವಿ ಮೇರೆಗೆ, ಮ್ಯೂಸಿಯಂ ಸ್ಥಾಪಿಸಲು ಒಕ್ಕೂಟದ ಸದಸ್ಯರು ಮುಂದಿನ ದಿನಗಳಲ್ಲಿ ನಿರ್ಧರಿಸಲಿದ್ದಾರೆ ಎಂದು ಸೌದಿ ಅರೇಬಿಯಾದಲ್ಲಿರುವ ಒಕ್ಕೂಟದ ಕಾರ್ಯದರ್ಶಿ ರವಿ ಮಹಾದೇವ ಭರವಸೆ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ತಿಮ್ಮಕ್ಕ, ತಮ್ಮ ಪರಿಸರ ಕಾರ್ಯವನ್ನು ಬಿಚ್ಚಿಟ್ಟರು. ‘ನನಗೆ ಅನೇಕ ಪ್ರಶಸ್ತಿಗಳು ಪುರಸ್ಕಾರಗಳು ಸಿಕ್ಕಿವೆ. ಅವುಗಳನ್ನು ಇಡಲು ಜಾಗ ಇಲ್ಲ. ಸಾಗರೋತ್ತರ ಕನ್ನಡಿಗರೆಲ್ಲಾ ಸೇರಿ ಒಂದು ಮ್ಯೂಸಿಯಂ ಕಟ್ಟಿಸಿರಿ’ ಎಂದರು. ಇದಕ್ಕೆ ಬಹುತೇಕ ಸದಸ್ಯರು ಸಹಮತ ಸೂಚಿಸಿದರು ಎಂದು ಇಟಲಿಯಲ್ಲಿರುವ ಸಂಘಟನಾ ಕಾರ್ಯದರ್ಶಿ ಹೇಮೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.