ಬೆಂಗಳೂರು: ಕೊರೋನಾ ಅಬ್ಬರದ ನಡುವೆಯೇ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೆರಡು ವರ್ಷದ ಅಧಿಕಾರವದಿ ಪೂರೈಸಬೇಕಾಗಿದೆ. ಆದ್ರೆ, ಅವಧಿಗೂ ಮುನ್ನ ಅವರನ್ನ ಬದಲಿಸಿ ಬೇರೆಯವರಿಗೆ ಸಿಎಂ ಪಟ್ಟಕಟ್ಟುವ ಕಸರತ್ತು ನಡೆದಿವೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಶಾಸಕರು, ಸಚಿವರುಗಳು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದಾರೆ.
ಇವೆಲ್ಲಾ ಬೆಳಗವಣಿಗೆಗಳು ನಡೆಯುತ್ತಿರುವುದು ನಿಜ ಎಂದು ಸ್ವತಃ ಕಂದಾಯ ಸಚಿವ ಆರ್. ಅಶೋಕ್ ಖಚಿತಪಡಿಸಿದ್ದಾರೆ. ಇದರೊಂದಿಗೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ನಿಜವಾಗಿದೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಚಟುವಟಿಕೆಗಳು ನಡೆದಿರುವುದು ನಿಜ.
ಶೇ.100 ರಷ್ಟು ನಿಜ, ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಸಚಿವರು ಕೂಡ ಭಾಗಿ ಆಗಿರೋದು ನಿಜ. ದೆಹಲಿಯಲ್ಲಿ ಶಾಸಕರು, ಸಚಿವರು ಇರೋದು ನಿಜ ಎಂದು ಸ್ಪಷ್ಟಪಡಿಸಿದರು.
ಹಲವಾರು ಸಭೆಗಳು ನಡೆಯುತ್ತಿವೆ. ಕೆಲವರು ಕೆಲವು ಕಡೆ ಪ್ರತ್ಯೇಕ ಸಭೆಗಳು ನಡೆಸುತ್ತಿರೋದು ಕೂಡಾ ಗಮನಕ್ಕೆ ಬಂದಿದೆ. ನಾಯಕತ್ವ ಬದಲಾವಣೆ ಬಗ್ಗೆ ಬೆಳವಣಿಗಳು ಆಗುತ್ತಿರುವುದು ಸತ್ಯ. ದೆಹಲಿಗೂ ಕೆಲವು ನಾಯಕರು ಹೋಗಿದ್ದಾರೆ. ಈ ಬೆಳವಣಿಗೆಗಳನ್ನು ನಾನು ಪಕ್ಕಕ್ಕಿಟ್ಟಿದ್ದೇನೆ. ನನ್ನ ಆದ್ಯತೆ ಎನಿದ್ದರೂ ಕೊರೋನಾ ನಿಯಂತ್ರಣ, ಆಕ್ಸಿಜನ್, ಬೆಡ್ ಕೊಡಿಸೋದು. ಕೊರೋನಾ ಹತೋಟಿಗೆ ತರುವ ಕೆಲಸ ಮಾಡ್ತಿದ್ದೇವೆ. ಕೊರೋನಾ ವಿರುದ್ಧದ ಹೋರಾಟ ನನಗೆ ಮುಖ್ಯವಾಗಿದೆ. ನನ್ನ ಗಮನ ಅತ್ತ ಕಡೆ ಅಷ್ಟೇ ಎಂದು ಹೇಳಿದರು.