ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯು ಜೋರಾಗಿದ್ದು, ಇದು ಇನ್ನೂ 15 ದಿನಗಳ ಕಾಲ ಹೀಗೆ ಮುಂದುವರೆಯುತ್ತದೆ ಎಂದು ಹೇಳುವ ಮೂಲಕ ಮಣಿಪಾಲ ಆಸ್ಪತ್ರೆಗಳ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್ ರಾಜ್ಯದ ಜನರಿಗೆ ಶಾಕ್ ಕೊಟ್ಟಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಕೋವಿಡ್ 2 ನೇ ಅಲೆಯ ತೀಕ್ಷ್ಣತೆ ಇನ್ನೂ 15 ದಿನ ಇರಲಿದ್ದು, ನಂತರ ಕಡಿಮೆಯಾಗಬಹುದು. ಕೊರೊನಾದ 2 ನೇ ಅಲೆಯು ಬಹಳ ವೇಗವಾಗಿ ವ್ಯಾಪಿಸುತ್ತಿದ್ದು, ಇನ್ನೂ 15 ದಿನಗಳ ಕಾಲ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಜೂನ್, ಜುಲೈನಲ್ಲಿ ಕಳೆದ ನವೆಂಬರ್, ಡಿಸೆಂಬರ್ ನಲ್ಲಿದ್ದ ಸ್ಥಿತಿ ಇರಲಿದೆ ಎಂದು ಹೇಳಿದ್ದಾರೆ.
ಈ ಕೊರೊನಾ ಎರಡನೇ ಅಲೆಯು ಜುಲೈನಲ್ಲಿ ಕಡಿಮೆಯಾದರೂ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ 3 ನೇ ಅಲೆ ದಾಳಿ ಇಡಲಿದೆ. ಹಾಗಾಗಿ ಜನರು ಮೈಮರೆಯದೇ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳಬೇಕು. ಮಾಸ್ಕ್ ಧರಿಸುವುದನ್ನ ಬಿಡಬಾರದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕೈ ತೊಳೆಯುವುದು ಯಾವುದನ್ನೂ ಬಿಡಬಾರದು ಎಂದು ಹೇಳಿದ್ದಾರೆ.