ಬೆಳಗಾವಿ: ರಾಜ್ಯ ಸರ್ಕಾರ ಪಡಿತರ ವಿತರಣೆಯಲ್ಲಿ 2 ಕೆ.ಜಿ. ಅಕ್ಕಿ ಕಡಿತಗೊಳಿಸಿರುವ ವಿಚಾರಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ರೈತ ಸಂಘದ ಕಾರ್ಯಕರ್ತರೊಂದಿಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಸಚಿವರು ಮಾತನಾಡಿದ್ದರೆ ಎನ್ನಲಾದ ಆಡಿಯೋದಲ್ಲಿ ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ನಿವಾಸಿ, ರೈತ ಸಂಘದ ಕಾರ್ಯಕರ್ತ ಈಶ್ವರ್ ಎಂಬುವರು ಪಡಿತರ ಕಡಿತ ಕುರಿತಂತೆ ಸಚಿವರಿಗೆ ಕರೆ ಮಾಡಿ ತರಾಟೆ ತೆಗೆದುಕೊಂಡಿದ್ದು, ಎರಡು ಕೆ.ಜಿ. ಅಕ್ಕಿ ಇಂತಹ ಸಂದರ್ಭದಲ್ಲಿ ಸಾಲುತ್ತಾ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವರು, ಮೂರು ಕೆ.ಜಿ. ರಾಗಿ ಮಾಡಿದ್ದೀವಲ್ಲ? ಎಂದಿದ್ದಾರೆ. ಆದರೆ ಸಚಿವರ ಉತ್ತರದಿಂದ ಅಸಮಾಧಾನಗೊಂಡ ಈಶ್ವರ್, ನಮ್ಮ ಉತ್ತರ ಕರ್ನಾಟಕಕ್ಕೆ ರಾಗಿ ಹೇಗೆ ಕೊಡುತ್ತೀರಾ? ಎಂದು ಮರು ಪ್ರಶ್ನಿಸಿದ್ದರು.
ಇದಕ್ಕೆ ಸಮಜಾಯಿಷಿ ನೀಡಿದ್ದ ಸಚಿವರು, ಉತ್ತರ ಕರ್ನಾಟಕಕ್ಕೆ ರಾಗಿ, ಜೋಳ ಮಾಡಿದ್ದೇವೆ ಎಂದು ಹೇಳಿದ್ದರು. ಆದರೆ ಲಾಕ್ ಡೌನ್ ಮಾಡಿದ್ದೀರಿ.. ದುಡಿಮೆ ಇಲ್ಲಾ ಎಂದು ಈಶ್ವರ್ ಹೇಳಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಪ್ರತಿ ತಿಂಗಳು 5ಕೆಜಿ ಅಕ್ಕಿಯನ್ನು ಲಾಕ್ಡೌನ್ ಸಲುವಾಗಿ ಕೊಡುತ್ತಿದೆ. ಮುಂದಿನ ತಿಂಗಳಿಂದ ಕೊಡುತ್ತೇವೆ ಎಂದು ತಿಳಿಸಿದ್ದರು.
ಸಚಿವರ ಉತ್ತರಗಳಿಂದ ಸಮಾಧಾನಗೊಳ್ಳದ ಈಶ್ವರ್ ಅವರು, ಕೇಂದ್ರ ಸರ್ಕಾರ ಕೊಡುವವರೆಗೂ ಸತ್ತು ಹೋಗೊದಾ ಅಥವಾ ಉಪವಾಸ ಇರೋದಾ? ಎಂದು ಖಾರವಾಗಿ ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡ ಸಚಿವರು, ಸತ್ತು ಹೋಗುವುದು ಒಳ್ಳೆಯದು. ಅದಕ್ಕಿಂತ ಪೂರ್ವದಲ್ಲಿ ಅಕ್ಕಿ ಮಾರಾಟ ಮಾಡೋದು ಬಿಟ್ಟುಬಿಡಿ. ನನಗೆ ಪೋನ್ ಮಾಡಬೇಡಿ ಎಂದಿದ್ದಾರೆ.
ನೀವು ಜನಪ್ರತಿನಿಧಿಗಳು, ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳು ಮಾತನಾಡಿದಾಗ ನೀವು ಉತ್ತರಿಸಬೇಕು. ಅದನ್ನು ಬಿಟ್ಟು ಫೋನ್ ಮಾಡ್ಬೇಡಿ ಎಂದರೆ ಹೇಗೆ ಎಂದು ಈಶ್ವರ್ ಪ್ರಶ್ನಿಸಿದ್ದರು. ಸದ್ಯ ಸಚಿವರು ಹಾಗೂ ರೈತ ಸಂಘದ ಕಾರ್ಯಕರ್ತ ಈಶ್ವರ್ ನಡುವಿನ ಮಾತುಕತೆಯ ಆಡಿಯೋ ವೈರಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.