ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ಸರಕಾರವು ಎಲ್ಲ ಹಬ್ಬಗಳ ಸಾರ್ವಜನಿಕ ಆಚರಣೆಯ ಮೇಲೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.
ಹೊಸ ಆದೇಶದಂತೆ ಮುಂಬರುವ ಯುಗಾದಿ, ಹೋಳಿ, ಷಬ್-ಎ- ಬರಾತ್, ಗುಡ್ ಫ್ರೈಡೇ ಸಹಿತ ಹಲವು ಹಬ್ಬಗಳು ಮತ್ತು ಸಂಬಂಧಿತ ಸಮಾರಂಭಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸಬಾರದು. ಈ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳ, ಮೈದಾನ, ಉದ್ಯಾನವನ, ಮಾರುಕಟ್ಟೆ, ಧಾರ್ಮಿಕ ಪ್ರದೇಶಗಳು ಮತ್ತಿತರ ಕಡೆಗಳಲ್ಲಿ ಸಭೆ-ಸಮಾರಂಭ ನಡೆಸದಂತೆ ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣ ಕಾಯ್ದೆ- 2005ರ ವಿಭಾಗ 51ರಿಂದ 60ರ ಅನ್ವಯ ಐಪಿಸಿ ಸೆಕ್ಷನ್ 188ರಂತೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಪ್ರತಿಬಂಧಕ ಕಾಯ್ದೆ- 2020ರಡಿ ಕ್ರಮ ಜರುಗಿಸಲಾಗುವುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಎಚ್ಚರಿಸಿದ್ದಾರೆ.
ಮುಂಜಾಗ್ರತೆ ವಹಿಸಿ :
ಎಲ್ಲ ಹಬ್ಬಗಳ ಆಚರಣೆ ಸಂದರ್ಭ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸುವವರ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ| ಸುಧಾಕರ್ ತಿಳಿಸಿದ್ದಾರೆ.
ನಿರ್ಬಂಧ ಬೇಡ :
ಜನರಲ್ಲಿ ಆತಂಕ ಮೂಡಿಸದೆ, ಆರ್ಥಿಕ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರದೆ ವೈಜ್ಞಾನಿಕವಾಗಿ ಪರಿಸ್ಥಿತಿ ನಿಭಾಯಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಈ ಕುರಿತು ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಸಮಯೋಚಿತ ಮತ್ತು ಸಕಾಲಿಕ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಸೋಂಕುಪೀಡಿತರ ಕೈಗೆ ಮುದ್ರೆ :
ಯಾವುದೇ ರಾಜ್ಯದಿಂದ ಬೆಂಗಳೂರಿಗೆ ಬರುವವರು ಆರ್ಟಿ ಪಿಸಿಆರ್ ನೆಗೆಟಿವ್ ವರದಿ ತರುವುದು ಎ. 1ರಿಂದ ಕಡ್ಡಾಯ. ಕೋವಿಡ್ ಸೋಂಕು ದೃಢಪಟ್ಟವರು ಮತ್ತು ಹೋಂ ಐಸೋಲೇಶನ್ನಲ್ಲಿ ಇರುವವರ ಕೈಗೆ ಈ ಹಿಂದೆ ಇದ್ದಂತೆ ಕೋವಿಡ್ ಮುದ್ರೆ ಹಾಕಲಾಗುವುದು. ಈ ನಿಯಮ ಶುಕ್ರವಾರದಿಂದ ಜಾರಿಗೆ ಬರಲಿದೆ ಎಂದು ಆರೋಗ್ಯ ಸಚಿವ ಡಾ| ಸುಧಾಕರ್ ಹೇಳಿದ್ದಾರೆ.