ಬೆಂಗಳೂರು: ಯಡಿಯೂರಪ್ಪನಂತಹ ಭ್ರಷ್ಟ ವ್ಯಕ್ತಿಯನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಿರುವ ಬಿಜೆಪಿ ನಾಯಕರಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಕಿಡಿಕಾರಿದ್ದಾರೆ.
ಮಾಜಿ ಸಚಿವ ಕೃಷ್ಣ ಭೈರೇಗೌಡ , ಮಾಜಿ ಸಂಸದ ಉಗ್ರಪ್ಪ ಮತ್ತು ಬ್ರಿಜೇಶ್ ಕಾಳಪ್ಪ ಅವರಿಂದ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ವಿ.ಎಸ್. ಉಗ್ರಪ್ಪ, “ಲೋಕಪಾಲ ಕಾಯ್ದೆ ಜಾರಿಗೆ ಬರಬೇಕು ಅಂತ ಹೋರಾಟ ಮಾಡಿದ್ದವರು ಇದೇ ಬಿಜೆಪಿವರು. ಆದ್ರೆ ಇಂದು ಆ ಬಗ್ಗೆ ಬಿಜೆಪಿಯ ಯಾವ ನಾಯಕರು ಮಾತನಾಡುತ್ತಿಲ್ಲ. ಕಪ್ಪು ಹಣ ದೇಶಕ್ಕೆ ವಾಪಸ್ ಬರುತ್ತೆ ಅಂತ ಹೇಳಿದ್ರೂ ಆ ಕೆಲಸ ಕೂಡ ಇವರಗೆ ಆಗಿಲ್ಲ ಎಂದು ಆರೋಪಿಸಿದರು.
ಬಿಜೆಪಿಯವರು ನಾವು ಅಧಿಕಾರಕ್ಕೆ ಬಂದರೆ ಕಪ್ಪು ಹಣವನ್ನು ದೇಶಕ್ಕೆ ಮರಳಿ ತರುತ್ತೇವೆ, ಲೋಕಪಾಲ ಜಾರಿ ಮಾಡುತ್ತೇವೆ, ಭ್ರಷ್ಟಾಚಾರವನ್ನು ತೊಲಗಿಸಿ ಭ್ರಷ್ಟರನ್ನು ಜೈಲಿಗಟ್ಟುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿದ್ದರು. ಆದರೆ, ಇಂದು ಬಿಜೆಪಿ ಅಧಿಕಾರದಲ್ಲಿ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಲೋಕಪಾಲ ಈವರೆಗೆ ಜಾರಿಯಾಗಿಲ್ಲ. ಇನ್ನೂ ಕಪ್ಪು ಹಣದ ಬಗ್ಗೆ ಮಾತೇ ಇಲ್ಲದಂತಾಗಿದೆ ಎಂದು ಕಿಡಿ ಕಾರಿದ್ದಾರೆ.
ದೇವನಹಳ್ಳಿ ತಾಲ್ಲೂಕು ಕೆಐಡಿಬಿ ಲ್ಯಾಂಡ್ ವಿಚಾರಕ್ಕೆ ಸಿಎಂ ಯಡಿಯೂರಪ್ಪ ವಿರುದ್ದ ಹೈ ಕೋಟ್೯ ಆದೇಶ ಒಂದನ್ನು ಕೊಟ್ಟಿದೆ. ಇಂತಹ ಭ್ರಷ್ಟ ವ್ಯಕ್ತಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಬಿಜೆಪಿಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?” ಎಂದು ಅವರು ಪ್ರಶ್ನಿಸಿದ್ದಾರೆ.
ಯಾವ ಮುಖ ಇಟ್ಟುಕೊಂಡು ಬಿಜೆಪಿಯವರು ಯಡಿಯೂರಪ್ಪ ಅವ್ರನ್ನು ಸಿಎಂ ಆಗಿ ಮುಂದುವರೆಸುತ್ತಾರೆ? ಚಾರ್ಜ್ ಶೀಟ್ ಹಾಕಿದ ಹಿನ್ನಲೆ ಯಡಿಯೂರಪ್ಪ ಟ್ರಯಲ್ ಫೇಸ್ ಮಾಡಲಿ. ಕಾಂಗ್ರೆಸ್ ಯಡಿಯೂರಪ್ಪ ಅವ್ರ ರಾಜೀನಾಮೆಗೆ ಆಗ್ರಹಿಸುತ್ತದೆ” ಎಂದಿದ್ದಾರೆ.