ಬೆಂಗಳೂರು: ಸಿ.ಡಿ ಪ್ರಕರಣದಲ್ಲಿ ಸರ್ಕಾರವು ರಮೇಶ್ ಜಾರಕಿಹೊಳಿ ಅವರಿಗೆ ನೀಡುತ್ತಿರುವ ಮನ್ನಣೆಯನ್ನು ಸಂತ್ರಸ್ತೆಗೆ ನೀಡುತ್ತಿಲ್ಲ ಎಂದು ವಕೀಲ ಜಗದೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿ.ಡಿ ಪ್ರಕರಣದಿಂದಾಗಿ ಸಂತ್ರಸ್ತೆಗೆ ಅನ್ಯಾಯವಾಗಿದೆ. ಈವರೆಗೂ ಆಕೆಗೆ ರಕ್ಷಣೆ ನೀಡಿಲ್ಲ. ಆದರೆ, ಸರ್ಕಾರವೇ ರಮೇಶ್ ಜಾರಕಿಹೊಳಿ ಪರವಾಗಿ ನಿಂತಿದೆ. ನಿರ್ಭಯ ಮಾರ್ಗಸೂಚಿ ಪ್ರಕಾರ ಯಾವುದೇ ಮಹಿಳೆಗೆ ಲೈಂಗಿಕ ಕಿರುಕುಳ ಆಗಿದ್ದರೆ ಆಕೆಗೆ ರಕ್ಷಣೆ ನೀಡಿ 24 ಗಂಟೆಯೊಳಗೆ ಎಫ್ಐಆರ್ ದಾಖಲಿಸಿಕೊಳ್ಳಬೇಕು ಎಂದು ದೂರಿನಲ್ಲಿ ಹೇಳಿದ್ದಾರೆ.
ಅಧಿಕಾರ ದುರುಪಯೋಗ ಮತ್ತು ಸ್ಥಾನ ಬಳಸಿಕೊಂಡು ಮಹಿಳೆಗೆ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡು ಆರೋಪ ಎದುರಿಸುತ್ತಿರುವ ರಮೇಶ್ ಜಾರಕಿಹೊಳಿ ಅವರಿಗೆ ಯಾವುದೇ ನೋಟಿಸ್ ನೀಡದೇ, ದೂರು ಕೊಟ್ಟವರಿಗೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸಂತ್ರಸ್ತೆಯ ದೂರು ದಾಖಲಿಸಿಕೊಂಡು ರಕ್ಷಣೆ ನೀಡದೇ ಆಕೆಯನ್ನೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.