ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಮುಂದುವರೆದಿದೆ. ಈ ನಡುವೆ ಹೋರಾಟ ಕೈಬಿಡುವಂತೆ ಸ್ವತಃ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಶಾಸಕ ಯತ್ನಾಳ್, ಪಂಚಮಸಾಲಿ ಮೀಸಲಾತಿ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಎದ್ದು ನಿಂತ ಸಿಎಂ ಬಿ.ಎಸ್. ಯಡಿಯೂರಪ್ಪ ಮೀಸಲಾತಿಗೆ ಸಂಬಂಧಿಸಿದಂತೆ ಇನ್ನು 6 ತಿಂಗಳಲ್ಲಿ ಹಿಂದುಳಿದ ವರ್ಗದ ಆಯೋಗದ ವರದಿ, ಸಮಿತಿ ವರದಿ ತರಿಸಿಕೊಳ್ಳುತ್ತೇನೆ. ನಂತರ ಕಾನೂನಾತ್ಮಕವಾಗಿ ಮೀಸಲಾತಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಸ್ವಾಮೀಜಿಗಳು ಧರಣಿ ಕೈಬಿಡುವಂತೆ ಮನವಿ ಮಾಡಬೇಕು ಎಂದು ಹೇಳಿದರು.
ಆರಂಭದಲ್ಲಿ ಇದಕ್ಕೆ ಯತ್ನಾಳ್ ಒಪ್ಪದಿದ್ದಾಗ ಸಿಎಂ ಯಡಿಯೂರಪ್ಪ ಸ್ಪಷ್ಟ ಭರವಸೆ ನೀಡುತ್ತಿದ್ದೇನೆ. 6 ತಿಂಗಳಲ್ಲಿ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ಸಿಎಂ ಭರವಸೆಗೆ ಮಣಿದ ಯತ್ನಾಳ್, 6 ತಿಂಗಳ ಕಾಲ ಪಂಚಮಸಾಲಿ ಮೀಸಲಾತಿ ಹೋರಾಟ ನಿಲ್ಲಿಸುವಂತೆ ಸದನದಿಂದಲೇ ಸ್ವಾಮೀಜಿಗೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಹೋರಾಟ ಕೈಬಿಡುವ ಸಾಧ್ಯತೆ ಇದೆ.