ಮಂಗಳೂರು, ಮಾರ್ಚ್ 11: ಕೇರಳದಿಂದ ಮಂಗಳೂರಿಗೆ ತೆರಳುವವರು ಆರ್ಟಿ-ಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕೆಂದು ದಕ್ಷಿಣ ಕನ್ನಡ ಆರೋಗ್ಯ ಮತ್ತು ಕುಟುಂಬ ಆರೋಗ್ಯ ಕಚೇರಿಯು ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿಗೆ ಪತ್ರ ಬರೆದಿದೆ.
ಕೇರಳದಿಂದ ಕರ್ನಾಟಕ ಪ್ರವೇಶಿಸುವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹೊಂದಿರಬೇಕು, ಈ ಬಗ್ಗೆ ಈಗಾಗಲೇ ಪ್ರಚಾರ ನೀಡಲಾಗಿದ್ದು, ಆದರೆ ಸಾರ್ವಜನಿಕರು ಈ ಕುರಿತು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಆದ್ದರಿಂದ ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ಮೂಲಕ ಪ್ರಚಾರ ಪಡಿಸುವಂತೆ ದಕ್ಷಿಣ ಕನ್ನಡ ಆರೋಗ್ಯ ಮತ್ತು ಕುಟುಂಬ ಆರೋಗ್ಯ ಕಚೇರಿಯು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗಡಿ ಮೂಲಕ ತೆರಳುವವರಿಗೆ ಕಡ್ಡಾಯ ನೆಗೆಟಿವ್ ಸರ್ಟಿಫಿಕೇಟ್ ಕುರಿತಂತೆ ಈ ಹಿಂದೆ ಹೈಕೋರ್ಟ್ ಕೂಡಾ ಗರಂ ಆಗಿತ್ತು. ಆದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ಕೊರೊನಾ ನಿಯಂತ್ರಣ ಹೇರಲು ಜಿಲ್ಲಾ ಆರೋಗ್ಯ ಇಲಾಖೆ ತೀರ್ಮಾನಿಸಿದೆ.
ಹಾಗೆ ನೋಡಿದರೆ, ಮಂಗಳೂರು ಹಾಗೂ ಕಾಸರಗೋಡಿನ ನಡುವೆ ನಿಕಟ ಸಂಪರ್ಕವಿದೆ. ಎರಡೂ ಪ್ರದೇಶಗಳ ನಡುವೆ ದೈನಂದಿನ ಜನರ ಓಡಾಟ ಹೆಚ್ಚಿದೆ. ಆರೋಗ್ಯ, ವಾಣಿಜ್ಯ ಸೇರಿದಂತೆ ಹಲವು ಚಟುವಟಿಕೆಗಳಿಗೆ ಎರಡೂ ಜಿಲ್ಲೆಗಳ ಜನರು ಓಡಾಟ ನಡೆಸುತ್ತಾರೆ.