ಕಲಬುರಗಿ: ಕೋವಿಡ್ ಸೋಂಕು ನಿರ್ಮೂಲನೆ ಆಗದೇ ಇರುವುದರಿಂದ ಸೋಂಕಿನಿಂದ ರಕ್ಷಣೆಗೆ ಇದುವರೆಗೂ ಲಸಿಕೆ ಪಡೆದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಲಸಿಕೆ ಸ್ವೀಕರಿಸಬೇಕೆಂದು ನಗರ ಪೊಲೀಸ್ ಆಯುಕ್ತ, ಐಜಿಪಿ ಎನ್. ಸತೀಶಕುಮಾರ ತಿಳಿಸಿದರು.
ನಗರದ ಪೊಲೀಸ್ ಮೈದಾನದಲ್ಲಿ ಮಂಗಳವಾರದಿಂದ ಆರಂಭವಾದ ನಗರ ಪೊಲೀಸ್ ಆಯುಕ್ತಾಲಯದ ಪ್ರಥಮ ಪೊಲೀಸ್ ಕ್ರೀಡಾಕೂಟವನ್ನು ಪಾರಿವಾಳ ಹಾರಿಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪೊಲೀಸರು ಸದಾ ಒತ್ತಡದ ನಡುವೆಯೇ ಕೆಲಸ ಮಾಡುವುದು ಅನಿವಾರ್ಯ. ಇದರ ನಡುವೆಯೂ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮುತುವರ್ಜಿ ವಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಪೊಲೀಸರು ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಇದು ಕೊರೊನಾದಿಂದ ರಕ್ಷಣೆ ಸಾಧ್ಯವಾಗಲಿದೆ. ಈಗಾಗಲೇ ಪ್ರಥಮ ಲಸಿಕೆ ಪಡೆದುಕೊಂಡವರಿಗೆ 2ನೇ ಹಂತದ ಲಸಿಕೆ ಕೊಡಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕರ್ತವ್ಯ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಗೌರವಯುತವಾಗಿ ವರ್ತಿಸುವ ಮೂಲಕ ಇಲಾಖೆ ಮತ್ತು ತಮಗೆ ಗೌರವ ಸಿಗುವಂತೆ ನಡೆದುಕೊಳ್ಳಬೇಕು.
ಕೆಲ ಸಿಬ್ಬಂದಿ ಅಶಿಸ್ತು ಕಂಡುಬರುತ್ತಿದೆ. ಅಲ್ಲದೇ, ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗುತ್ತಿರುವುದರಿಂದ ಕರ್ತವ್ಯಕ್ಕೆ ಪೆಟ್ಟು ಬೀಳುತ್ತದೆ. ಅದನ್ನು ನಿಯಂತ್ರಿಸಿಕೊಂಡು ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು. ಆಯುಕ್ತಾಲಯದ ಪ್ರಥಮ ಕ್ರೀಡಾಕೂಟವಾಗಿದ್ದರಿಂದ ಪೊಲೀಸರಿಗೆ ಹೊಸ ಗುರುತು ಸಿಗಲಿದೆ.
ಆಟೋಟಗಳ ಜತೆಗೆ ದೈಹಿಕ ಶ್ರಮ ಮಾಡುವ ವ್ಯಾಯಾಮ, ಯೋಗ ರೂಢಿಸಿಕೊಳ್ಳಬೇಕು. ಆಡಳಿತಾತ್ಮಕವಾಗಿ ಅಗತ್ಯವಿರುವ ಎಲ್ಲ ಕೆಲಸಗಳನ್ನು ಸರ್ಕಾರ
ಮಾಡಿಕೊಡುತ್ತಿದೆ. ಹೊಸ ವಾಹನ, ಕಟ್ಟಡ ಸೇರಿ ಅಗತ್ಯ ಸೌಕರ್ಯ ಕಲ್ಪಿಸುವ ಕೆಲಸವಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾ ಕ್ರೀಡಾಜ್ಯೋತಿ ಸ್ವೀಕರಿಸಿ ಕ್ರೀಡಾಪುಟಗಳಿಗೆ ಶುಭ ಹಾರೈಸಿದರು. ಉಪ ಪೊಲೀಸ್ ಆಯುಕ್ತ ಡಿ. ಕಿಶೋರಬಾಬು, ಜಿಪಂ ಸಿಇಒ ಡಾ| ದಿಲೀಷ ಸಸಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, ಉಪ ಪೊಲೀಸ್ ಆಯುಕ್ತ ಶ್ರೀಕಾಂತ ಕಟ್ಟಿಮನಿ, ಎಸಿಬಿ ಎಸ್ಪಿ ಮಹೇಶ ಮೇಘಣ್ಣನವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಸಹಾಯಕ ಪೊಲೀಸ್ ಆಯುಕ್ತರಾದ ಅಂಶುಕುಮಾರ, ಜೆ.ಎಚ್. ಇನಾಮದಾರ, ಗಿರೀಶ ಎಸ್.ಬಿ., ಗಂಗಾಧರ ಮಠಪತಿ, ಎಫ್ಎಸ್ಎಲ್ ನಿರ್ದೇಶಕ ಪ್ರವೀಣ ಸಂಗನಾಳಮಠ, ಕಾರಾಗೃಹ ಅಧೀಕ್ಷಕ ಶಿವಕುಮಾರ, ಇನ್ಸ್ಪೆಕ್ಟರ್ಗಳಾದ ಪಂಡಿತ ಸಗರ, ಶಿವಾನಂದ ಗಾಣಿಗೇರ, ದ್ದರಾಮೇಶ ಗಡೆದ ನಿರೂಪಣೆ, ಭಾಸು ಚವ್ಹಾಣ, ಅರುಣಕುಮಾರ ಮುರಗುಂಡಿ, ಚಂದ್ರಶೇಖರ ತಿಗಡಿ, ಕಪಿಲ್ದೇವ, ಶಾಂತಿನಾಥ ಹಾಜರಿದ್ದರು.
ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಹೊಸ ಪೊಲೀಸ್ ಪೇದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರೆಲ್ಲರೂ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಹೊಸ ಪೇದೆಗಳು ಕರ್ತವ್ಯಕ್ಕೆ ಹಾಜರಾದ ಬಳಿಕ ಕೆಲಸದ ಒತ್ತಡ ಕಡಿಮೆಯಾಗಲಿದೆ.
ಎನ್.ಸತೀಶಕುಮಾರ, ಪೊಲೀಸ್ ಆಯುಕ್ತ
Laxmi News 24×7