ಬೆಂಗಳೂರು : ರಾಜ್ಯದ ಬಸ್ ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಗೃಹ ನಿರ್ಮಾಣ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ವಿಧಾನಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ 165 ಬಸ್ ನಿಲ್ದಾಣಗಳ ಪೈಕಿ 66 ನಿಲ್ದಾಣಗಳಲ್ಲಿ ಮಹಿಳಾ ವಿಶ್ರಾಂತಿ ಕೊಠಡಿ ಇಲ್ಲ. ಅಲ್ಲಿ ಆದಷ್ಟು ಬೇಗ ವಿಶ್ರಾಂತಿ ಗೃಹ ನಿರ್ಮಿಸಲಾಗುತ್ತದೆ ಎಂದರು.
ಈ ವರ್ಷ ಆದಾಯದಲ್ಲಿ ಬಹಳ ಕೊರತೆಯಾಗಿದೆ. 4 ಸಾವಿರ ಕೋಟಿ ರೂ ಆದಾಯ ಕೊರತೆ ಎದುರಾಗಿದೆ. ಸಾರಿಗೆ ನಿಗಮಗಳಿಗೆ 2,980 ಕೋಟಿ ನಿವ್ವಳ ನಷ್ಟವಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. ಪ್ರಯಾಣಿಕರು ಒಂದೇ ಕಡೆ ಶಾಪಿಂಗ್ ಮಾಡಿ, ಸಿನಿಮಾ ನೋಡಿ ಮನರಂಜನೆ ಅನುಭವಿಸಿ ನಂತರ ಸಕಾಲಕ್ಕೆ ತಮ್ಮ ಊರಿನ ಬಸ್ ಹಿಡಿದು ಹೋಗಲು ಸ್ಯಾಟಲೈಟ್ ಬಸ್ ನಿಲ್ದಾಣ ಅಗತ್ಯ. ಇದನ್ನು ಆದ್ಯತೆಯಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದರು.