ಬೆಂಗಳೂರು (ಫೆ. 25): ಕೋವಿಡ್ನಿಂದಾಗಿ ಬಿಎಂಟಿಸಿ ನಷ್ಟ ಅನುಭವಿಸುತ್ತಿದ್ದು, ಟಿಕೆಟ್ ದರ ಏರಿಕೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಚಿಂತನೆ ನಡೆಸಲಾಗಿದ್ದು, ದರ ಏರಿಕೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳೇ ನಿರ್ಧರಿಸಲಿದ್ದಾರೆ ಎಂದು ಸಾರಿಗೆ ಸಚಿವರಾಗಿರುವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಈ ಮೂಲಕ ಈ ಬಾರಿ ಬಜೆಟ್ನಲ್ಲಿ ಬಿಎಂಟಿಸಿ ದರ ಏರಿಕೆ ಪ್ರಸ್ತಾಪ ಮುಂದಿಡುವ ಸುಳಿವು ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಹಿಂದೆ ಕೆಎಸ್ಆರ್ಟಿಸಿ ಮೂರು ನಿಗಮಗಳ ಟಿಕೆಟ್ ದರ ಹೆಚ್ಚಳ ಮಾಡಿದ್ದೇವು. ಈ ನಿಗಮಗಳಿಗೆ ಶೇ. 13 ರಷ್ಟು ದರ ಏರಿಕೆ ಮಾಡಲಾಗಿದೆ. ಈ ಹಿನ್ನಲೆ ಸದ್ಯಕ್ಕೆ ಕೆಎಸ್ ಆರ್ ಟಿಸಿ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ. ಬಿಎಂಟಿಸಿದರವನ್ನು ಶೇ 18ರಿಂದ 20 ರಷ್ಟು ಏರಿಕೆ ಮಾಡುವಂತೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಅಂತಿಮ ತೀರ್ಮಾನ ಮುಖ್ಯಮಂತ್ರಿಗಳು ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ವಿದ್ಯಾರ್ಥಿ ಪಾಸ್ದರದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ. ನಿಗಮಗಳು ನಷ್ಟದಲ್ಲಿದ್ದರೂ ವಿದ್ಯಾರ್ಥಿಗಳಿಗಾಗಿ ಸೇವಾ ಮನೋಭಾವನೆ ದೃಷ್ಟಿಯಿಂದ ಪಾಸ್ ದರದಲ್ಲಿ ಯಾವುದೇ ಏರಿಕೆ ಮಾಡುವುದಿಲ್ಲ ಎಂದರು.
ಕರ್ನಾಟಕ ಸಾರಿಗೆ ನಿಗಮ ಹೊಸ ಆಯಾಮ ಶುರುಮಾಡಲಿದೆ. ಸಾರಿಗೆ ಇಲಾಖೆ ಮುಖಾಂತರ ಕಾರ್ಗೋ ಮತ್ತು ಪಾರ್ಸೆಲ್ ಗಳನ್ನು ಆರಂಭಿಸಲಾಗುವುದು. ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳಿಂದ ಈ ಸೇವೆ ಆರಂಭ ಮಾಡಲಾಗುವುದು. ಸಾರಿಗೆಯ ನಾಲ್ಕು ನಿಗಮಗಳು ಪ್ರತಿವರ್ಷ ಹಾನಿ ಸಂಭವಿಸುತ್ತಿದೆ. ಕಾರ್ಗೋ ಸೇವೆಯಿಂದ ಪ್ರತಿ ವರ್ಷ 80 ಕೊಟಿ ಲಾಭ ಬರುವ ನಿರೀಕ್ಷೆ ಇದೆ. ಹಳ್ಳಿಯಿಂದ ಜಿಲ್ಲೆವರೆಗೂ ಸೇವೆ ಇರಲಿದೆ ಕೆಎಸ್ ಆರ್ ಟಿಸಿ ಎಲ್ಲೆಲ್ಲಿ ಓಡುತ್ತದೆ ಅಲ್ಲೆಲ್ಲಾ ನಮ್ಮ ಕಾರ್ಗೋ ಯೋಜನೆ ಜಾರಿಗೆ ತರಲಾಗುವುದು ಎಂದರು.
ನಷ್ಟದಲ್ಲಿಯೂ ಸಂಬಳ
ಕೊರೋನಾದಿಂದ ನಿಗಮದಲ್ಲಿ ನಾಲ್ಕು ಸಾವಿರ ಕೋಟಿ ಕೊರತೆ ಉಂಟಾಗಿದೆ. ಅಲ್ಲದೇ 2780 ಕೋಟಿಯಷ್ಟು ನಷ್ಟ ಆಗಿದೆ. ಡಿಸೆಂಬರ್ ವರೆಗೆ ಇಂಧನ, ಆದಾಯಕ್ಕೂ ಕೊರತೆ ಇದೆ. ಸರ್ಕಾರದಿಂದ 1780 ಕೋಟಿ ಹಣ ಪಡೆದುಕೊಂಡ 1.60 ಲಕ್ಷ ಸಿಬ್ಬಂದಿಗೆ ಸಂಬಳ ಕೊಡುತ್ತಿದ್ದೇವೆ. ಇಲ್ಲಿವರೆಗೂ ಸಂಬಳ ನೀಡುವುದನ್ನು ನಿಲ್ಲಿಸಿಲ್ಲ. ಬಿಎಂಟಿಸಿಯಲ್ಲಿ ಬಹಳ ಆದಾಯದ ಕೊರತೆ ಇದೆ. ಸರ್ಕಾರದಿಂದ 80 ಕೋಟಿ ಪಡೆದು, ಬಿಎಂಟಿಸಿ ನೌಕಕರಿಗೆ ಸಂಬಳ ಕೊಟ್ಟಿದ್ದೇವೆ. 556 ಕೋಟಿ ಬ್ಯಾಂಕ್ ನಿಂದ ಸಾಲ ಪಡೆದುಕೊಂಡು ಬಾಕಿ ಕಡಿಮೆ ಮಾಡಿದ್ದೇವೆ. ಕೋವಿಡ್ ಗೂ ಮೊದಲು 1508 ಕೋಟಿ ರೂ ನಷ್ಟ ಇತ್ತು. ಈಗ ನಾಲ್ಕೂ ನಿಗಮಗಳಿಂದ ಒಟ್ಟು 2780 ಕೋಟಿ ನಷ್ಟ ವಾಗಿದೆ.
ವಿದ್ಯಾರ್ಥಿ ಪಾಸ್ ಹಣ 2720 ಕೋಟಿ ಸರ್ಕಾರದಿಂದ ಬರಬೇಕು. ಸೇವಾ ಸಿಂಧು ಯೋಜನೆಯಡಿ ವಿದ್ಯಾರ್ಥಿ ಪಾಸ್ ವಿತರಣೆ ಮಾಡಲಾಗುವುದು. ಈ ಬಗ್ಗೆ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಇದೇ ವೇಳೆ ಭರವಸೆ ನೀಡಿದರು.
ನಿಗಮದ ನೌಕಕರಿಂದ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಆರು ಬೇಡಿಕೆ ಈಡೇರಿಸಿದ್ದೇವೆ. ಆರೋಗ್ಯ ಭಾಗ್ಯ ಯೋಜನೆ ಕಲ್ಪಿಸಿದ್ದೇವೆ. ಕೋವಿಡ್ ವಾರಿಯರ್ಸ್ ರೀತಿ 30 ಲಕ್ಷ ಪರಿಹಾರ ನೀಡುತ್ತೇವೆ. ಕರ್ತವ್ಯ ವೇಳೆ 112 ನೌಕಕರು ಮೃತಪಟ್ಟಿದ್ದಾರೆ 15 ದಿನಗಳೊಳಗೆ ಹಣ ಬಿಡುಗಡೆ ಮಾಡುತ್ತೇವೆ. ಹಿರಿಯ ಅಧಿಕಾರಿಗಳಿಂದ ಕಿರುಕುಳ ಆರೋಪ ವಿಚಾರ ಕಮಿಟಿಗಳನ್ನ ರಚನೆ ಮಾಡಿ ತೀರ್ಮಾನ ಮಾಡಲು ಮುಂದಾಗಿದ್ದೇವೆ. ಆರನೇ ವೇತನ ಬಗ್ಗೆ ಸಭೆಗಳಾಗಿವೆ. ಅದನ್ನೂ ಈಡೇರಿಸುವ ಬಗ್ಗೆ ಕ್ರಮ ಅಂತರ್ ನಿಗಮ ವರ್ಗಾವಣೆ ಬಗ್ಗೆ ಸಮಿತಿ ರಚನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು