ಧಾರವಾಡ: ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ದೇಶದ ಯಾವುದೇ ಪ್ರಜೆ ಯಾವುದೇ ರೀತಿಯ ಮಾಹಿತಿಯನ್ನು ಪಡೆಯಬಹುದು. ಅದೇ ರೀತಿಯ ಮಾಹಿತಿಯನ್ನು ಕೇಳಿ ಒಬ್ಬರು ಸಲ್ಲಿಸಿದ್ದ ಅರ್ಜಿಗೆ ಕರ್ನಾಟಕ ವಿಶ್ವವಿದ್ಯಾಲಯದ ಆರ್ಟಿಐ ಉತ್ತರಿಸಿದ ಅಧಿಕಾರಿಗಳು ಉತ್ತರಿಸಿದ ರೀತಿಯೇ ನಗು ತರಿಸುವಂತಿದೆ.
ಧಾರವಾಡದ ಕೆ.ಎಸ್. ಜಯಂತ್ ಕೆಲವು ಮಾಹಿತಿ ಕೋರಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 2021ರ ಜನವರಿ 1ರಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಫೆಬ್ರವರಿ 10ರಂದು ಉತ್ತರ ಬಂದಿದೆ. ‘ನೀವು ಕೇಳಿರುವ ಮಾಹಿತಿ ಪಿಎಂಇಬಿಯಲ್ಲಿ ಲಭ್ಯವಿದೆ. ಆ ಮಾಹಿತಿಯನ್ನು ನಾವು ನಿಮಗೆ ಕೊಡಬೇಕೆಂದರೆ ಮೊದಲು ನೀವು ಪ್ರತಿ ಪುಟಕ್ಕೆ 2 ರೂಪಾಯಿಯಂತೆ 10 ರೂಪಾಯಿ ಜೆರಾಕ್ಸ್ ಶುಲ್ಕವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕಟ್ಟಬೇಕು’ ಎಂದು ಮರುಉತ್ತರ ನೀಡಲಾಗಿದೆ.
ಈ ಪತ್ರವನ್ನು ನೋಡಿ ಜಯಂತ್ ಒಮ್ಮೆಲೆ ಅಚ್ಚರಿಗೊಂಡಿದ್ದಾರೆ. ’10 ರೂಪಾಯಿ ಕಟ್ಟಿ ಎಂದು ಕಳುಹಿಸಲಾಗಿರುವ ಪತ್ರಕ್ಕೆ ವಿಶ್ವವಿದ್ಯಾಲಯದ ಅಧಿಕಾರಿಗಳು 22 ರೂಪಾಯಿಯ ಸ್ಟಾಂಪ್ ಅಂಟಿಸಿದ್ದಾರೆ. ಅದೇ ಹಣವನ್ನು ಜೆರಾಕ್ಸ್ಗೆ ಬಳಸಿದ್ದರೆ, 12 ರೂಪಾಯಿ ಉಳಿತಾಯ ಆಗುತ್ತಿರಲಿಲ್ಲವೇ’ ಎಂದು ಜಯಂತ್ ಪ್ರಶ್ನಿಸಿದ್ದಾರೆ. ‘ನಾವು ಈ ರೀತಿ ಕೇಳಿದರೆ ಅದಕ್ಕೂ ಅವರ ಬಳಿ ಸಿದ್ಧ ಉತ್ತರವಿರುತ್ತದೆ. ಆರ್ಟಿಐ ಮಾಹಿತಿ ಕೊಡುವಾಗ ಜೆರಾಕ್ಸ್ ಶುಲ್ಕವನ್ನು ಅರ್ಜಿದಾರರು ಸಲ್ಲಿಸಬೇಕು ಅಂತ ಸರ್ಕಾರದ ನಿಯಮವೇ ಇದೆ ಎನ್ನುತ್ತಾರೆ. ಆದರೆ ಅಧಿಕಾರಿಗಳು ಈ ರೀತಿಯ ನಿಯಮ ಪಾಲನೆ ಮಾಡುವುದು ಕಾಮನ್ ಸೆನ್ಸ್ನ ಗಡಿಯಿಂದ ಹೊರಗಿರುವುದಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಅದೇ ವಿಶ್ವವಿದ್ಯಾಲಯದ ಅದೇ ವಿಭಾಗಕ್ಕೆ ಒಂದೇ ಸಮಯಕ್ಕೆ ಇನ್ನೊಂದು ಮಾಹಿತಿ ಕೇಳಿದ್ದೆ, ಅದಕ್ಕೆ 106 ರೂಪಾಯಿ ಜೆರಾಕ್ಸ್ ಶುಲ್ಕ ತುಂಬಿ ಎಂದು ಅದಕ್ಕೆ 22 ರೂಪಾಯಿ ಸ್ಟಾಂಪ್ ಹಚ್ಚಿ ಇನ್ನೊಂದು ಪತ್ರ ಅದೇ ದಿನಾಂಕದಲ್ಲೆ ಕಳಿಸಿದ್ದಾರೆ. ಯೋಚಿಸಿದ್ರೆ ಎರಡನ್ನೂ ಒಟ್ಟಿಗೆ ಕಳುಹಿಸಬಹುದಿತ್ತು. ಎರಡೂ ಪತ್ರ ಒಂದೇ ದಿನ ಬಂದಿವೆ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.