ರಾಯಚೂರು: ಮುಖ್ಯಮಂತ್ರಿ ಯಡಿಯೂರಪ್ಪನವರದ್ದು ಸಫಲತೆಗಿಂತ ವಿಫಲತೆನೆ ಜಾಸ್ತಿ. ಕ್ಯಾಬಿನೆಟ್ ಮಾಡುವುದರಲ್ಲೇ ಅವರ ಸಮಯ ಹೋಗುತ್ತಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ವಿಧಾನಸಭೆ ಚುನಾವಣೆ ಬಂದರೂ ನಾವು ಅಚ್ಚರಿ ಪಡಬೇಕಿಲ್ಲ ಅಂತ ಮಾಜಿ ಸಚಿವ ಸಿಎಂ ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ, ಈ ಹಿಂದೆ ಡಿಸೆಂಬರ್ನಲ್ಲಿ ರಾಜಕೀಯ ಕೋಲಾಹಲವಾಗುತ್ತೆ ಅಂತ ಹೇಳಿದ್ದೆ ಅದು ನಿಜವಾಗಿದೆ ಎಂದರು. ಕೂಡಲೇ ಚುನಾವಣೆ ಮಾಡಬೇಕು ಅನ್ನೋದು ಬಿಜೆಪಿ ವರಿಷ್ಠರಲ್ಲೂ ಚಿಂತನೆ ಶುರುವಾಗಿದೆ. ಯಡಿಯೂರಪ್ಪನವರು ಮಂತ್ರಿಮಂಡಲ ಪುನಃ ರಚನೆ ಮಾಡುತ್ತಿದ್ದರೂ ಎಲ್ಲವೂ ಸರಿಹೋಗಿಲ್ಲ ಎಂದರು.
ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಆದ್ರೆ ಪಕ್ಷದಲ್ಲಿ ನಿರೀಕ್ಷಿತ ನ್ಯಾಯ ಸಿಕ್ಕಿಲ್ಲ. ಅಲ್ಲೂ ಅಸಮಧಾನ ಇದೆ. ಅಸಾದುದ್ದಿನ್ ಓವೈಸಿ ರಾಜ್ಯದಲ್ಲಿ ಎಂಐಎಂ ಶಾಖೆ ತೆರೆಯಲು ಹೊರಟಿದ್ದಾರೆ. ಅದು ರಾಜ್ಯದ ಹಿತಾಸಕ್ತಿಗೆ ಒಳ್ಳೆಯ ಬೆಳವಣಿಗೆ ಅಲ್ಲ. ಮುಸ್ಲಿಂ ಸಮಾಜದಲ್ಲಿ ಗೊಂದಲದ ವಾತಾವಣ ನಿರ್ಮಾಣವಾಗಿದೆ. ಅಗಸ್ಟ್ ನಲ್ಲಿ ನಮ್ಮ ಎಲ್ಲಾ ಮುಖಂಡರ ಸಭೆ ಕರೆದು ಮುಂದಿನ ನಡೆಯ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತ ತಿಳಿಸಿದರು.
26 ಜನ ಮಂಗಳಮುಖಿಯರನ್ನ ಆರಿಸಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ಅವರು ಮೋದಿ ಜಪಮಾಡುತ್ತಿದ್ದಾರೆ ಒಂದು ರೂ. ದುಡ್ಡು ತರೋ ಶಕ್ತಿ ಇವರಲ್ಲಿಲ್ಲ. ಜಿಎಸ್ ಟಿಯಲ್ಲಿ 30 ಸಾವಿರ ಕೋಟಿ ರೂಪಾಯಿ ನಮಗೆ ಬರಬೇಕಿದೆ. ಹೆಚ್ಇಎಲ್, ಬಿಇಎಲ್ ಮಾರಾಟ ಮಾಡಲಿಕ್ಕೆ ಹೊರಟಿದ್ದಾರೆ. ನಾನು ವಿಮಾನಯಾನ ಸಚಿವನಾಗಿದ್ದಾಗ ಇಲಾಖೆ ಲಾಭದಲ್ಲಿತ್ತು. ನಾನು ಯಾರ ಜಾತಿ ನೋಡಲಿಲ್ಲಾ, ದೇಶಕ್ಕೆ ಒಳ್ಳೆಯದನ್ನ ಮಾಡುವವರನ್ನ ಕೆಲಸಕ್ಕೆ ನೇಮಿಸಿದ್ದೆ ಎಂದರು.