Breaking News
Home / Uncategorized / ವಾಟ್ಸ್‌ಆಯಪ್‌ ಹೊಸ ನೀತಿ: ಕಳವಳ ವ್ಯಕ್ತಪಡಿಸಿದ ಸಂಸದೀಯ ಸಮಿತಿ

ವಾಟ್ಸ್‌ಆಯಪ್‌ ಹೊಸ ನೀತಿ: ಕಳವಳ ವ್ಯಕ್ತಪಡಿಸಿದ ಸಂಸದೀಯ ಸಮಿತಿ

Spread the love

ನವದೆಹಲಿ: ವಾಟ್ಸ್‌ ಆಯಪ್ ನೀತಿಯಲ್ಲಿ ಖಾಸಗಿತನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರಸ್ತಾಪಿಸಲಾಗಿರುವ ಬದಲಾವಣೆಗಳ ಕುರಿತು ಸಂಸದೀಯ ಸಮಿತಿಯ ಸದಸ್ಯರು ಕಳವಳ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.

ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಎದುರು ವಾಟ್ಸ್‌ಆಯಪ್‌ನ ಪ್ರತಿನಿಧಿ ಹಾಜರಾಗಿದ್ದು, ‘ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ನೀತಿಯನ್ನು ಪ್ರಸ್ತಾಪಿಸಲಾಗಿದೆ. ವಾಟ್ಸ್‌ಆಯಪ್‌ ಚಾಟ್‌ ಹಾಗೂ ಕರೆಗಳು ಆಗಲೂ ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಟೆಡ್‌ (ಬೇರೆಯವರು ಸಂದೇಶ ನೋಡಲು ಆಗುವುದಿಲ್ಲ) ಆಗಿರಲಿದೆ ಎಂದಿದ್ದಾರೆ.

ಭಾರತೀಯ ಬಳಕೆದಾರರಿಗೆ ಅನುಕೂಲಕರವಲ್ಲದ ಬದಲಾವಣೆಗಳನ್ನು ಪ್ರಸ್ತಾಪಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ವಾಟ್ಸ್‌ಆಯಪ್‌, ನುಣಿಚಿಕೊಳ್ಳುವ ರೀತಿಯಲ್ಲಿ ಉತ್ತರಿಸಿದೆ. ‘ಅವರಿಂದ ಸರಿಯಾದ ಉತ್ತರವೇ ಇಲ್ಲ’ ಎಂದು ಸಂಸದೀಯ ಸ್ಥಾಯಿ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.

ದತ್ತಾಂಶವನ್ನು ಹಣಗಳಿಕೆಗಾಗಿ ಬಳಸಿಕೊಳ್ಳುವುದರ ಬಗ್ಗೆ ಕಂಪನಿಯ ಪ್ರತಿನಿಧಿ ಖಚಿತಪಡಿಸಿದ್ದಾರೆ ಎಂದಿದ್ದಾರೆ.

ಫೇಸ್‌ಬುಕ್‌, ಟ್ವಿಟರ್‌ ಹಾಗೂ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳೊಂದಿಗೆ ಸಮಿತಿಯು ಪ್ರತ್ಯೇಕವಾಗಿ ಮಾತುಕತೆ ನಡೆಸಿದೆ.

ಚರ್ಚೆಯ ಬಳಿಕ ವಾಟ್ಸ್‌ಆಯಪ್‌ ವಕ್ತಾರರು ಪ್ರಕಟಣೆಯಲ್ಲಿ ‘ಗೌರವಾನ್ವಿತ ಸಂಸದೀಯ ಸಮಿತಿಯ ಎದುರು ಹಾಜರಾಗಿ ನಮ್ಮ ನಿಲುವುಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮುಂಬರುವ ದಿನಗಳಲ್ಲಿಯೂ ಸಮಿತಿಯೊಂದಿಗೆ ಸಹಕರಿಸಲು ಬಯಸುತ್ತೇವೆ’ ಎಂದು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸ್‌ ಆಯಪ್‌ ಸಿಇಒ ವಿಲ್‌ ಕ್ಯಾಥ್‌ಕಾರ್ಟ್‌ ಅವರಿಗೆ ಪತ್ರ ಬರೆದು, ‘ಹೊಸ ನೀತಿಯು ಬಳಕೆದಾರರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಿಲ್ಲ. ಇದರಿಂದಾಗಿ ಭಾರತೀಯರ ಆಯ್ಕೆ ಮತ್ತು ಸ್ವಾಯತ್ತೆಯ ಮೇಲೆ ಆಗುವ ಪರಿಣಾಮದ ಬಗ್ಗೆ ಕಳವಳ ಮೂಡಿದೆ. ಹೀಗಾಗಿ ಪ್ರಸ್ತಾವಿತ ಬದಲಾವಣೆಗಳನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಮಾಹಿತಿಯ ಗೋಪ್ಯತೆ, ಆಯ್ಕೆಯ ಸ್ವಾತಂತ್ರ್ಯ ಮತ್ತು ದತ್ತಾಂಶದ ಸುರಕ್ಷತೆಯನ್ನು ಪರಿಗಣಿಸಬೇಕು’ ಎಂದು ಹೇಳಿತ್ತು.

ನೀತಿಯಲ್ಲಿನ ಬದಲಾವಣೆಗಳು 40 ಕೋಟಿ ಬಳಕೆದಾರರಿರುವ ಭಾರತ ದೇಶದ ನಾಗರಿಕರ ಮೇಲೆ ಸೂಕ್ತವಲ್ಲದ ರೀತಿಯಲ್ಲಿ ಪರಿಣಾಮ ಬೀರಬಹುದಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಜನವರಿ ಆರಂಭದಲ್ಲಿ ವಾಟ್ಸ್‌ಆಯಪ್‌ ತನ್ನ 200 ಕೋಟಿ ಬಳಕೆದಾರರಿಗೆ ಖಾಸಗಿತನಕ್ಕೆ ಸಂಬಂಧಿಸಿದ ಹೊಸ ನೀತಿಗೆ ಸಮ್ಮತಿಸುವಂತೆ ಕೇಳಿತ್ತು. ವಾಟ್ಸ್‌ಆಯಪ್‌ ಬಳಕೆದಾರರ ದತ್ತಾಂಶವನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವ ಉದ್ದೇಶವನ್ನು ಬದಲಾವಣೆ ತರಲಾಗಿರುವ ನೀತಿಯು ಒಳಗೊಂಡಿದೆ. ವಾಟ್ಸ್ ‌ಆಯಪ್‌ನ ಪ್ರಸ್ತಾಪಿತ ನೀತಿಯ ಬಗ್ಗೆ ಜಾಗತಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಅದನ್ನು ಜಾರಿಗೆ ತರುವ ದಿನಾಂಕವನ್ನು ಮೇ 15ಕ್ಕೆ ಮುಂದೂಡಲಾಗಿದೆ.


Spread the love

About Laxminews 24x7

Check Also

ಕ್ಯಾನ್ಸರ್‌ ರೋಗಿಗಳಿಗೆ ಸಿಹಿಸುದ್ದಿ: 72 ಲಕ್ಷ ರೂ. ನ Cancer ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ

Spread the love ನವದೆಹಲಿ : ಕ್ಯಾನ್ಸರ್‌ ರೋಗಿಗಳಿಗೆ ಝೈಡಸ್‌ ಕಂಪನಿ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು 72 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ