ಬೆಂಗಳೂರು: ಕರ್ನಾಟಕವನ್ನು ದೇವರೇ ಕಾಪಾಡಬೇಕು ಎಂದ ಆರೋಗ್ಯ ಸಚಿವ ಶ್ರೀರಾಮುಲು ಅವರ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಂಡಿಸಿದ್ದು, ಸರ್ಕಾರ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಕರ್ನಾಟವನ್ನು ದೇವರೆ ಕಾಪಾಡಬೇಕು ಎಂದು ಶ್ರೀರಾಮುಲು ಹೇಳಿದ್ದಂತೆ ಅಲ್ಲ, ಒಂದು ಸರ್ಕಾರ ಹೇಳಿದಂತೆ. ಯಡಿಯೂರಪ್ಪ ನೇತೃತ್ವದ ಟೀಂ ಅಧಿಕಾರ ಬೇಕು ಅಂತಾ ಬಹಳ ಶ್ರಮವಹಿಸಿ ಬಂದು ಈಗ ದೇವರು ಕಾಪಾಡಬೇಕು ಅನ್ನುವುರಾದರೆ, ಒಂದು ಕ್ಷಣವೂ ಅಧಿಕಾರದಲ್ಲಿರು ಸಾಧ್ಯವಿಲ್ಲ. ಈ ಸರ್ಕಾರ ಕೂಡಲೇ ರಾಜೀನಾಮೆ ನೀಡಲಿ, ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ನಡೆಯಲಿ ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಗವರ್ನರ್ ಆಡಳಿತ ಬರಲಿ, ಅಧಿಕಾರಿಗಳೇ ಆಡಳಿತ ನಡೆಸಲಿ. ಈ ಸರ್ಕಾರ ಎಲ್ಲ ರಂಗಗಳಲ್ಲೂ ಸಂಪೂರ್ಣ ವಿಫಲವಾಗಿದೆ. ಕೋವಿಡ್ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಆದರೆ ಈಗ ಸಚಿವರೇ ಎಲ್ಲಾ ದೇವರ ಕತೆ, ದೇವ್ರೇ ಕಾಪಾಡಬೇಕು ಎಂದ ಮೇಲೆ, ಅಧಿಕಾರ ತ್ಯಜಿಸಲಿ. ಜನರ ರಕ್ಷಣೆ ಮಾಡಲಾಗದ ಸರ್ಕಾರ ರಾಜೀನಾಮೆ ಕೊಟ್ಟು ಹೋಗಲಿ ಎಂದು ಗುಡುಗಿದರು.