ಬೆಂಗಳೂರು: ಜನವರಿ 14 ರಂದು ಎಸ್ಎಸ್ಎಲ್’ಸಿ ಪರೀಕ್ಷೆ ಪಠ್ಯಕ್ರಮವನ್ನು ಪ್ರಕಟಿಸಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಚಾಮರಾಜನಗರ ತಾಲೂಕಿನ ನಲೂರು ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ಪಠ್ಯ ನಿರ್ಧಾರವಾಗಿದ್ದು, ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಶಾಲೆಗಳಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳಿಗೆ ಧೈರ್ಯ ಹೇಳುತ್ತಿದ್ದೇನೆ. ಗುರುವಾರ ಎಸ್ಎಸ್ಎಲ್’ಸಿ ಪರೀಕ್ಷೆಯ ಪಠ್ಯಕ್ರಮವನ್ನು ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಕಲಿಕೆಯ ಹಿತದೃಷ್ಟಿಯಿಂದ ಹಾಗೂ ಅವರ ಕಲಿಕೆಗೆ ಖಚಿತತೆಯನ್ನು ಒದಗಿಸುವ ಸಲುವಾಗಿ ಎಸ್ಎಸ್ಎಲ್’ಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಗುರುತಿಸಲಾಗುವ ಅಂಶಗಳನ್ನು ಒದಗಿಸಲಾಗುವುದು. ಬೋಧನೆ-ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪಠ್ಯಾಂಶಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಶೀಘ್ರವೇ ಪ್ರಕಟಿಸಿ ಈ ವಿಷಯಗಳನ್ನೊಳಗೊಂಡ ಸವಿವರವಾದ ಕೈಪಿಡಿಯನ್ನು ಎಲ್ಲ ಶಾಲೆಗಳಿಗೆ ಒದಗಿಸಲಾಗುವುದು. ಯಾವುದೇ ಆತಂಕಕ್ಕೆ ಅವಕಾಶವಿಲ್ಲ
ಪ್ರತಿ ವರ್ಷ ಲಭ್ಯವಾಗುತ್ತಿದ್ದ ಶಾಲಾ ಕೆಲಸದ ದಿನಗಳಿಗೆ ಅನುಗುಣವಾಗಿ ಸಿದ್ಧಪಡಿಸಿದ್ದ ಪಠ್ಯಪುಸ್ತಕಗಳನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ. ಪಠ್ಯಪುಸ್ತಕಗಳಲ್ಲಿರುವ ಪೂರ್ಣ ವಿಷಯಗಳನ್ನು ಈ ಸಾಲಿನಲ್ಲಿ ಬೋಧಿಸುವುದು ಕಷ್ಟಸಾಧ್ಯವಾದ್ದರಿಂದ 2020-21 ಶೈಕ್ಷಣಿಕ ಸಾಲಿಗೆ ಲಭ್ಯವಾಗಬಹುದಾದ ದಿನಗಳಿಗೆ ಅನುಸಾರವಾಗಿ ಕೆಲವು ಪಠ್ಯಾಂಶಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದಿರಲು ಇಲಾಖೆ ನಿರ್ಧರಿಸಿದೆ. ಸೂಚಿಸಿರುವ ವಿಷಯಾಂಶಗಳ ಅನುಸಾರ ಯಾವ ಘಟಕಗಳ ಬೋಧನಾ-ಕಲಿಕೆಗೆ, ಯಾವ ಸ್ವರೂಪದ ಕಲಿಕಾ ಪ್ರಕ್ರಿಯೆ ಹೊಂದಿಕೊಳ್ಳುತ್ತದೆ ಎಂದು ತೀರ್ಮಾನಿಸಿ ಅದರಂತೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಕ್ಕಳು ಮತ್ತು ಪಾಲಕರಲ್ಲಿ ಆತ್ಮವಿಶ್ವಾಸ ತುಂಬುವ ಅಗತ್ಯ ಇರುವುದರಿಂದ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಶಾಲಾರಂಭದ ನಂತರ ಈತನಕ 150-170 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಶಾಲಾರಂಭ, ಪರೀಕ್ಷೆ, ಸುರಕ್ಷತೆ, ಪಠ್ಯ ನಿಗದಿ ಸೇರಿದಂತೆ ಮಕ್ಕಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಕ್ಕಳ ಅನಿಸಿಕೆಯನ್ನು ಪಡೆಯುತ್ತಿದ್ದೇನೆ. ಈ ವಾರದಲ್ಲಿ ನಾನು ಬಾಗಲಕೋಟೆ ಜಿಲ್ಲೆಯ ಹುನಗುಂದ, ಸಾವಳಗಿ ಸೇರಿದಂತೆ ಮುಂಬೈ ಕರ್ನಾಟಕದ ವಿವಿಧ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದಿದ್ದಾರೆ.