ಬೆಂಗಳೂರು: ಬಜೆಟ್ವರೆಗೆ ಏನೂ ಆಗುವುದಿಲ್ಲ. ಅಲ್ಲಿವರೆಗೆ ಏನೂ ಮಾತನಾಡೋಕೆ ಹೋಗಬೇಡಿ. ಮಾರ್ಚ್ 31ರ ವರೆಗೆ ಕಲ್ಪನೆಗಳು ಬೇಡ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಬೆಂಗಳೂರಲ್ಲಿಂದು ಮಾತನಾಡಿದ ಅವರು, ರಾಜಕಾರಣದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬಜೆಟ್ವರೆಗೆ ಏನೂ ಆಗದು. ಅಲ್ಲಿಯವರೆಗೆ ಏನೂ ಮಾತನಾಡೋಕೆ ಹೋಗಬೇಡಿ. ಮಾರ್ಚ್ 31ರ ವರೆಗೆ ಕಲ್ಪನೆ ಬೇಡ. ಸಿದ್ದರಾಮಯ್ಯನವರು ಈಗಲೂ ಇರಬೇಕು, 2028ಕ್ಕೂ ಇರಬೇಕು ಅಂತ ಹೇಳಿದ್ದೇನೆ. ಅದರ ಬಗ್ಗೆ ಯಾಕೆ ನೀವು ಹೇಳಲ್ಲ ಎಂದರು.
ಸಿಎಂ ವೈರಾಗ್ಯದ ಮಾತು ವಿಚಾರವಾಗಿ ಪ್ರತಿಕ್ರಿಯಿಸಿ, ಡಿಕೆಶಿ ವೈರಾಗ್ಯದ ಮಾತು ಹೇಳಿಲ್ವಾ?. ಕಾರ್ಯಕರ್ತನಾಗಿ ಇರ್ತೇನೆ ಅಂತ ಹೇಳಿಲ್ವಾ?. ಕಾರ್ಯಕರ್ತ ಪರ್ಮನೆಂಟ್. ರಾಜಕಾರಣ ನಿಂತ ನೀರಲ್ಲ. ಚಲನಶೀಲತೆಯೇ ರಾಜಕಾರಣ. ಇವರಲ್ಲಿ ಯಾರ್ಯಾರು ಏನೇನಾಗ್ತಾರೆ ಗೊತ್ತಿಲ್ಲ. ಈಗಲೇ ಎಲ್ಲವನ್ನೂ ಊಹೆ ಮಾಡೋಕೆ ಆಗಲ್ಲ. ಸಿದ್ದರಾಮಯ್ಯ ಅವರ ಅಭಿಪ್ರಾಯವನ್ನು ಹೈಕಮಾಂಡ್ ಪರಿಗಣಿಸಬಹುದು ಎಂದು ತಿಳಿಸಿದರು.
ಸತೀಶ್ ಜಾರಕಿಹೊಳಿ ಭೇಟಿ ವಿಚಾರಕ್ಕೆ, ರಾಜನಹಳ್ಳಿ ವಾಲ್ಮೀಕಿ ಜಾತ್ರೆ ಇದೆ. ಬಸನಗೌಡ ದದ್ದಲ್ ಅದಕ್ಕೆ ಅಧ್ಯಕ್ಷರು. ಅದರ ಪೂರ್ವಭಾವಿ ತಯಾರಿ ಸಭೆ ಕರೆದಿದ್ದಾರೆ. ಅಲ್ಲಿ ಪ್ರೆಸ್ಮೀಟ್ ಕೂಡ ಇದೆ. ಅದಕ್ಕೆ ನಾವೆಲ್ಲರೂ ಹೋಗಬೇಕಿತ್ತು. ಕಾರಣಾಂತರಗಳಿಂದ ಹೋಗೋಕೆ ಆಗಿಲ್ಲ. ಜಾತ್ರೆ ಯಶಸ್ಸಿಗೆ ಎಲ್ಲರೂ ಸಹಕಾರ ಕೊಡಬೇಕು. ಅದಕ್ಕೆ ಭೇಟಿಯಾಗಿದ್ದೆವು ಎಂದು ತಿಳಿಸಿದರು.
ಡಿಕೆಶಿ ಹಸ್ತಕ್ಷೇಪದ ಬಗ್ಗೆ ಹೆಚ್ಡಿಕೆ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ರು. ಆಗ ಎಷ್ಟು ಖಾತೆಯಲ್ಲಿ ಹಸ್ತಕ್ಷೇಪ ಮಾಡಿದ್ರು?. ಅದರ ದೊಡ್ಡ ಲಿಸ್ಟೇ ಕೊಡ್ತೇನೆ. ಒಬ್ಬ ಹಿರಿಯ ಸಚಿವರಾಗಿ ಸಲಹೆ ಕೊಡಲು ಅಧಿಕಾರವಿದೆ. ಜನರ ಹಿತದೃಷ್ಟಿಯಿಂದ ಅಧಿಕಾರ ಇದೆ. ಸಾಮಾನ್ಯರಿಂದ ಸಚಿವರಿಗೂ ಅಧಿಕಾರ ಇದೆ. ಬಳ್ಳಾರಿ ಪರಿಸ್ಥಿತಿ ತಿಳಿ ಮಾಡೋಕೆ ಏನು ಮಾಡಬೇಕು. ಆ ಮಾಹಿತಿ ಆಧರಿಸಿ ಕೆಲ ಸಲಹೆಗಳನ್ನು ನೀಡಿರ್ತಾರೆ. ಅದೇ ಆದೇಶಗಳು ಆಗೋದಿಲ್ಲ ಎಂದರು.
Laxmi News 24×7