ಮೈಸೂರು (ಡಿ. 22): ಎಲ್ಲರನ್ನೂ ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯನವರದ್ದು ದಪ್ಪ ಚರ್ಮ. ನನ್ನನ್ನು ಮಂತ್ರಿಸ್ಥಾನದಿಂದ ಕೆಳಗಿಳಿಸಿ, ಬರೆ ಹಾಕಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಆ ಮಹದೇವಪ್ಪ ಸಿದ್ದರಾಮಯ್ಯನ ಚೇಲ. ಸಿದ್ದರಾಮಯ್ಯನ ದುರಹಂಕಾರದಿಂದಲೇ ಜನರು ಅವರನ್ನು ಸೋಲಿಸಿದರು. ಅವರು ಸರಿಯಾಗಿದ್ದರೆ ಅವರ ಪಕ್ಷದವರೇ ಅವರ ವಿರುದ್ಧ ಯಾಕೆ ಹೈಕಮಾಂಡ್ಗೆ ದೂರು ಕೊಡುತ್ತಿದ್ದರು? ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ದಪ್ಪ ಚರ್ಮದ ಮನುಷ್ಯ. ಆತನಿಗೆ ನಾಗರಿಕತೆ, ಸಂಸ್ಕೃತಿಯೇ ಇಲ್ಲ. ಆತ ಎಲ್ಲರನ್ನೂ ಏಕವಚನದಲ್ಲೇ ಮಾತನಾಡಿಸುತ್ತಾರೆ. ಏಕವಚನದಲ್ಲಿ ಮಾತನಾಡಿಸುವುದು ಅವರ ಅಂತರಂಗದಿಂದ ಬಂದಿದೆ. ಕೇಳಿದರೆ ನಾನು ಹಳ್ಳಿಯಿಂದ ಬಂದಿದ್ದೇನೆ ಅನ್ನೋ ಉತ್ತರ ಕೊಡುತ್ತಾರೆ. ಹಳ್ಳಿಯಿಂದ ಸಾಕಷ್ಟು ಜನ ಬಂದಿದ್ದಾರೆ. ಆದರೆ ಯಾರೂ ಕೂಡ ನಿಮ್ಮಂತೆ ಮಾತನಾಡುವುದಿಲ್ಲ ಎಂದು ಮೈಸೂರಿನಲ್ಲಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ದು ನನಗೆ ಮರ್ಮಾಘಾತವಾಗಿದೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ನನ್ನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದ್ದು ನನ್ನ ಜೀವನದಲ್ಲೇ ಹಾಕಿದ ದೊಡ್ಡ ಬರೆ. ಆ ಮರೆಯಲಾಗದ ಬರೆ ಮೂಲಕ ನನಗೆ ಸಿದ್ದರಾಮಯ್ಯ ವಿಪರೀತ ನೋವು ಕೊಟ್ಟರು. ಉಪಚುನಾವಣೆ ಸಂದರ್ಭದಲ್ಲಿ ಸಾಕಷ್ಟು ನೋವು ಕೊಟ್ಟರು. ಮಹದೇವಪ್ಪ, ಸಿದ್ದರಾಮಯ್ಯ ನನ್ನ ಬಗ್ಗೆ ಸಾಕಷ್ಟು ಮಾತನಾಡಿದರು. ಅವರ ದುರಹಂಕಾರದಿಂದಲೇ ಜನರು ಸಿದ್ದರಾಮಯ್ಯನವರನ್ನು ಸೋಲಿಸಿದರು. ನೀವು ಸಾಕಷ್ಟು ಕೆಲಸ ಮಾಡಿದ್ದರೆ ಬಾದಾಮಿಗೆ ಏಕೆ ಓಡಿ ಹೋಗುತ್ತಿದ್ದಿರಿ? ಎಂದು ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದ್ದಾರೆ.