ಅಡಿಲೇಡ್, ಡಿ.15- ಟೆಸ್ಟ್ ವಿಶ್ವಕಪ್ ಫೈನಲ್ಗೇರಲು ಹೋರಾಟ ನಡೆಸುತ್ತಿರುವ ವಿರಾಟ್ ಕೊಹ್ಲಿ ಬಳಗದ ಟೀಂ ಇಂಡಿಯಾವು ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ಅಗ್ನಿ ಪರೀಕ್ಷೆಯನ್ನು ಎದುರಿಸುತ್ತಿದೆ. ನಾಲ್ಕು ಪಂದ್ಯಗಳ ಟೆಸ್ಟ್ನಲ್ಲಿ ಭಾರತವು ಗೆದ್ದು ತಮ್ಮಲ್ಲೇ ಟ್ರೋಫಿ ಉಳಿಸಿಕೊಳ್ಳಲು ಮುಂದಾಗಿದ್ದರೆ, ತವರಿನಲ್ಲಿ ಮಿಂಚುವ ಮೂಲಕ ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಟ್ರಾವಿಸ್ ಹೆಡ್ ಬಳಗ ಸಜ್ಜಾಗಿದೆ.
#ಪಿಂಕ್ ಬಾಲ್ ಟೆಸ್ಟ್:
ಅಡಿಲೇಡ್ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯವು ಭಾರತ ತಂಡ ವಿದೇಶದಲ್ಲಿ ಆಡುತ್ತಿರುವ ಮೊದಲ ಹಗಲು ರಾತ್ರಿ ಪಂದ್ಯವಾಗಿದ್ದು ಈ ಪಂದ್ಯಕ್ಕಾಗಿ ಪಿಂಕ್ ಬಾಲ್ ಬಳಸುತ್ತಿರುವುದರಿಂದ ಪಂದ್ಯದ ಮೇಲೆ ಕುತೂಹಲ ಹೆಚ್ಚಿಸಿದೆ
#ವಿರಾಟ್ ಮೇಲೆ ಕಣ್ಣು:
ಅಡಿಲೇಡ್ ಟೆಸ್ಟ್ನ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇಲೆ ಸ್ವದೇಶಕ್ಕೆ ಮರಳುವುದರಿಂದ ಎಲ್ಲರ ಕಣ್ಣು ವಿರಾಟ್ ಮೇಲೆ ನೆಟ್ಟಿದೆ. ಭಾರತ ತಂಡದ ಬ್ಯಾಟಿಂಗ್ ಶಕ್ತಿಯು ವಿರಾಟ್ ಕೊಹ್ಲಿ ಮೇಲೆ ಅವಲಂಬಿಸಿರುವುದರಿಂದ ಕೊಹ್ಲಿಯನ್ನು ಔಟ್ ಮಾಡಲು ರಣತಂತ್ರ ಹೆಣೆಯಲಾಗಿದೆ ಎಂದು ಆಸೀಸ್ ತರಬೇತುದಾರ ಜಸ್ಟೀನ್ ಲ್ಯಾಂಗರ್ ಹೇಳಿದ್ದಾರೆ.
#ಆಸೀಸ್ಗೆ ಗಾಯದ ಸಮಸ್ಯೆ:
ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಗಾಯದ ಸಮಸ್ಯೆ ಅನುಭವಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮತ್ತೆ ಗಾಯದ ಸಮಸ್ಯೆಗಳು ಎದುರಾಗಿದೆ. ಅಭ್ಯಾಸದ ವೇಳೆ ಮಾಜಿ ನಾಯಕ ಸ್ಟೀವ್ ಸ್ಮಿತ್ ಕೂಡ ಗಾಯಗೊಂಡಿರುವುದರಿಂದ ಆಸ್ಟ್ರೇಲಿಯಾದ ಬ್ಯಾಟಿಂಗ್ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಯಾದರೂ ಅಭ್ಯಾಸ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕೆಲವು ಯುವ ಆಟಗಾರರು ಅವಕಾಶ ಪಡೆಯಲು ಕಾತರರಾಗಿದ್ದಾರೆ.