ಬೆಳಗಾವಿ: ಕುಂದಾ ನಗರಿಯಿಂದ ಬೆಂಗಳೂರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿಸಿಎಂಗಳಾದ ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಪ್ರಯಾಣ ಬೆಳೆಸಿದ್ದಾರೆ.ಬೆಳಗಾವಿಯಿಂದ 7.40ಕ್ಕೆ ಹೊರಟ ಏರ್ ಇಂಡಿಯಾ ವಿಮಾನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಜೊತೆಯಾಗಿ ಫ್ಲೈಟ್ ಏರಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಸಭೆ ಹಿನ್ನೆಲೆ ಸಿಎಂ ಸೇರಿದಂತೆ ಬಹುತೇಕ ಎಲ್ಲ ಕಮಲ ನಾಯಕರು ಬೆಳಗಾವಿಗೆ ಆಗಮಿಸಿದ್ದರು. ಇತ್ತ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಮಹಲಿಂಗಪುರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಲು ಬಂದಿದ್ದರು.
ಎರಡೂ ಪಕ್ಷದ ಉಭಯ ನಾಯಕರು ಬೆಂಗಳೂರಿಗೆ ಹಿಂದಿರುಗುವ ವೇಳೆ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾಗಿದ್ದಾರೆ. ಜೊತೆಯಲ್ಲಿ ಒಂದೇ ವಿಮಾನ ಏರಿ ಬೆಂಗಳೂರಿನತ್ತ ಆಗಮಿಸಿದ್ದಾರೆ.