ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೊಲೀಸರನ್ನು ಮಾರುವೇಷದಲ್ಲಿ ಕಳುಹಿಸಿ ಏನಾದರೂ ಅನಾಹಿತ ಸಂಭವಿಸಿದರೆ ನಾವು ಹೊಣೆಯಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ನಾಳೆ ನಾವೇನು ಚೇಷ್ಟೆ ಮಾಡಲ್ಲ. ಯಡಿಯೂರಪ್ಪ ಪೊಲೀಸರನ್ನು ಮಾರು ವೇಷದಲ್ಲಿ ಕಳಿಸಿ ಏನಾದ್ರೂ ಅನಾಹುತ ಮಾಡಿದ್ರೆ ನಾವು ಜವಾಬ್ದಾರಿಯಲ್ಲ. ನಮ್ಮ ಬಗ್ಗೆ ಹಗುರವಾಗಿ ಮಾತಾನಾಡಬೇಡಿ ಎಂದು ಹೇಳುವ ಮೂಲಕ ಪೊಲೀಸ್ ಕಮೀಷನರ್ ಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ.
ನಾವ್ ಯಾಕೆ ಅನುಮತಿ ಕೇಳಬೇಕು. ಇತಿಹಾಸದಲ್ಲಿ ಕರ್ನಾಟಕ ಬಂದ್ ಗೆ ನಾವು ಪೊಲೀಸರ ಅನುಮತಿ ಕೇಳಿಲ್ಲ ಕೇಳಲ್ಲ. ನಾಳೆ ರ್ಯಾಲಿ ಇರುತ್ತೆ, ನಾವ್ಯಾರಿಗೂ ಜಗ್ಗಲ್ಲ. ಗುಂಡೇಟು ಹೊಡೀತಾರಾ ಹೊಡಿಲಿ ನೋಡೋಣ ಎಂದು ವಾಟಾಳ್ ಸವಾಲೆಸೆದಿದ್ದಾರೆ.
ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಎಂ, ಬಂದ್ ಮಾಡದಂತೆ ಮನವಿ ಮಾಡಿಕೊಂಡರು. ಬಂದ್ ಮಾಡಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ. ಬಂದ್ ಮಾಡುವ ಅಗತ್ಯ ಇಲ್ಲ. ಎಲ್ಲ ಸಮಾಜವನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಕನ್ನಡಕ್ಕೆ ಏನೇನೋ ಆದ್ಯತೆ ಕೊಡಬೇಕೋ, ಇನ್ನೂ ಹೆಚ್ಚಿನದಾಗಿ ಏನೇನೋ ಕೊಡಬೇಕೋ ಅದನ್ನು ಕೊಡಲು ನಾನು ಸಿದ್ಧನಿದ್ದೇನೆ. ಕನ್ನಡದ ಮುಖಂಡರು ಏನು ಹೇಳ್ತಾರೋ ಅದನ್ನು ನಾನು ಮಾಡಲು ಸಿದ್ಧನಿದ್ದೇನೆ. ದಯಮಾಡಿ ಬಂದ್ ಗೆ ಎಲ್ಲಿಯೂ ಕೂಡ ಅವಕಾಶ ಇಲ್ಲ. ಯಾರು ಕೂಡ ಬಂದ್ ಮಾಡಬೇಡಿ. ದಯವಿಟ್ಟು ಇದಕ್ಕೆ ಎಲ್ಲರು ಸಹಕರಿಸಿಬೇಕು ಎಂದು ಸಿಎಂ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ಕಮಿಷನರ್ ಕಮಲ್ ಪಂಥ್, ಕನ್ನಡಪರ ಹೋರಾಟಗಾರರಿಗೆ ಎಚ್ಚರಿಕೆ ನಿಡಿದರು.