ಸಂಡೇ ಲಾಕ್ಡೌನ್ ಮುಗಿಯುತ್ತಿದ್ದಂತೆ ಊರುಗಳತ್ತ ಜನ- ಟ್ರಾಫಿಕ್
ಬೆಂಗಳೂರು: ಬೆಂಗಳೂರು ಲಾಕ್ಡೌನ್ಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಮಂಗಳವಾರ ರಾತ್ರಿ 8 ಗಂಟೆಯಿಂದ 7 ದಿನ ಕಾಲ ಲಾಕ್ಡೌನ್ ಜಾರಿಯಾಗಲಿದೆ. ಈ ವೇಳೆ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಸಂಚಾರ ಸಂಪೂರ್ಣ ಸ್ಥಬ್ಧವಾಗಲಿದೆ. ಹೀಗಾಗಿ ಜನರು ಸಂಡೇ ಲಾಕ್ಡೌನ್ ಮುಗಿಯುತ್ತಿದ್ದಂತೆ ತಮ್ಮ ತಮ್ಮ ಗ್ರಾಮಗಳತ್ತ ಹೋಗುತ್ತಿದ್ದಾರೆ.
ಸಂಡೇ ಲಾಕ್ಡೌನ್ ಸಮಯ ಮುಗಿದ ತಕ್ಷಣ ಬೈಕ್ ಮತ್ತು ಕಾರುಗಳು ರಸ್ತೆಗೆ ಇಳಿದಿದೆ. ಮಂಗಳವಾರದಿಂದ ಮತ್ತೆ ಒಂದು ವಾರದ ಲಾಕ್ಡೌನ್ ಹಿನ್ನೆಲೆಯಲ್ಲಿ ಜನರು ಬೆಂಗಳೂರು ಬಿಟ್ಟು ಹಳ್ಳಿಗಳಿಗೆ ಹೊರಡುತ್ತಿದ್ದಾರೆ. ಇದರಿಂದ ತುಮಕೂರು ರಸ್ತೆಯ ನವಯುಗ ಟೋಲ್ನಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಮಾಮೂಲಿ ದಿನಕ್ಕೆ ಹೋಲಿಸಿದರೆ ಇಂದು ಡಬಲ್ ವಾಹನಗಳು ಟೋಲ್ನಲ್ಲಿ ಸಂಚಾರ ಮಾಡುತ್ತಿವೆ.
ಈ ಹಿಂದೆಯೂ ಜನರು ಕೊರೊನಾಗೆ ಭಯಭೀತರಾಗಿ ಬೆಂಗಳೂರು ಬಿಟ್ಟು ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ ಸಿಎಂ ಯಡಿಯೂರಪ್ಪ ಅವರು, ಯಾರೂ ಬೆಂಗಳೂರು ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಸಿಎಂ ಮನವಿ ಮಾಡಿದರೂ ಬೆಂಗಳೂರು ಬಿಡುವವರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ನೆಲಮಂಗಲದ ಜಾಸ್ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದೆ. ಕಾರು ಬೈಕ್ ಇನ್ನಿತರ ವಾಹನಗಳಲ್ಲಿ ಜನರು ತಮ್ಮ ಊರುಗಳತ್ತ ಪಯಣ ಮಾಡುತ್ತಿದ್ದಾರೆ.
ಕೆಲವರು ಮನೆಯ ವಸ್ತುಗಳ ಸಮೇತ ಊರಿಗೆ ಹೊರಟ್ಟಿದ್ದಾರೆ. ಬೆಂಗಳೂರು ಒಂದು ವಾರ ಲಾಕ್ಡೌನ್ ಆಗಿದೆ. ನಮ್ಮ ಕುಟುಂಬದವರು ಊರಲ್ಲಿ ಇದ್ದಾರೆ. ಹೀಗಾಗಿ ನಾನು ಹೋಗುತ್ತಿದ್ದೀನಿ ಎಂದು ಕಂಡಕ್ಟರ್ ಹೇಳಿದ್ದಾರೆ.
ನಾನು ಗಾರೆ ಕೆಲಸ ಮಾಡುತ್ತಿದ್ದೆ. ಆದರೆ ಲಾಕ್ಡೌನ್ನಿಂದಾಗಿ ಮಾಡಲು ಕೆಲಸವಿಲ್ಲ, ಹಣವೂ ಇಲ್ಲ. ಜೀವನ ಕಷ್ಟವಾಗಿದೆ, ಮನೆ ಬಾಡಿಗೆ ಕಟ್ಟಲು ಸಾಧ್ಯವಾಗಿಲ್ಲ. ಅದಕ್ಕೆ ಬೆಂಗಳೂರು ಬಿಟ್ಟು ಊರಿಗೆ ಹೋಗುತ್ತಿದ್ದೇವೆ. ಊರಲ್ಲೇ ಕೆಲಸ ಮಾಡಿಕೊಂಡು ಜೀವನ ಮಾಡುತ್ತೇವೆ ಎಂದು ಬೆಂಗಳೂರು ಬಿಟ್ಟು ಹೊರಟ ಜನರು ಹೇಳುತ್ತಿದ್ದಾರೆ.