ಬೆಂಗಳೂರು,ನ.25-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ನಾನು ಏಕೈಕ ಮಹಿಳಾ ಸಚಿವೆಯಾಗಿದ್ದು, ನನ್ನನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಯಾವ ಕಾರಣಕ್ಕಾಗಿ ಸಂಪುಟದಿಂದ ಕೈ ಬಿಡುತ್ತಾರೆ ಎಂದು ಪ್ರಶ್ನಿಸಿದ ಅವರು, ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಇಂತಹ ವರದಿಯಾಗುತ್ತಿರುವುದು ಏಕೆ ಎಂದು ತಿಳಿಯುತ್ತಿಲ್ಲ.
ಪ್ರತಿ ಬಾರಿ ಸಂಪುಟ ವಿಸ್ತರಣೆಯಾದಾಗ ನನ್ನ ಹೆಸರು ಕೇಳಿಬರುತ್ತಿದೆ. ಆದರೆ ರಾಷ್ಟ್ರೀಯ ಇಲ್ಲವೇ ರಾಜ್ಯದ ನಾಯಕರಿಂದ ನನಗೆ ಯಾವುದೇ ಅಧಿಸೂಚನೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯಿಂದ ಮೂವರು ಮಹಿಳಾ ಶಾಸಕಿಯರು ಗೆದ್ದಿದ್ದೇವೆ.
ಅದರಲ್ಲಿ ನಾನು ಏಕೈಕ ಮಹಿಳಾ ಸಚಿವೆಯಾಗಿರುವುದರಿಂದ ನನ್ನನ್ನು ಸಂಪುಟದಲ್ಲಿ ಮುಂದುವರೆಸುತ್ತಾರೆ ಎಂಬ ವಿಶ್ವಾಸವಿದೆ. ಕೊಟ್ಟಿರುವ ಅಧಿಕಾರವನ್ನು ಸಮರ್ಪಕವಾಗಿ ನಿರ್ವಹಿಸಿದ್ದೇನೆ. ಇಲಾಖೆಯಲ್ಲಿ ಒಂದಿಷ್ಟು ಸುಧಾರಣೆಗಳನ್ನು ತಂದಿದ್ದೇನೆ ಎಂದು ಹೇಳಿದರು.
ನಾನು ಇಲಾಖೆಯ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಭೇಟಿ ಕೊಟ್ಟಿದ್ದೆ. ಸ್ಮೃತಿ ಇರಾನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಅದಕ್ಕೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ. ಪಕ್ಷದ ಜೆ.ಪಿ.ನಡ್ಡ ಅವರನ್ನು ಭೇಟಿಯಾದರೆ ತಪ್ಪೇನು ಎಂದರು.
ನಾನು ಪಕ್ಷದ ನಿಷ್ಠಾವಂತೆ ಕಾರ್ಯಕರ್ತೆ, ಎರಡು ಬಾರಿ ನಿಪ್ಪಾಣಿಯಿಂದ ಗೆದ್ದಿದ್ದೇನೆ. ಪಕ್ಷದ ವರಿಷ್ಠರ ಸೂಚನೆಯನ್ನು ಪಾಲನೆ ಮಾಡುವುದು ನನ್ನ ಕರ್ತವ್ಯ ಎಂದರು.