Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿಯ ಸುವರ್ಣಸೌಧಕ್ಕೆ 12 ವರ್ಷ ತುಂಬಿದರೂ ಕೂಡ ಇನ್ನೂ ಸೌಧಕ್ಕೆ ಸುವರ್ಣ ಕಾಲವೇ ಕೂಡಿ ಬಂದಿಲ್ಲ.

ಬೆಳಗಾವಿಯ ಸುವರ್ಣಸೌಧಕ್ಕೆ 12 ವರ್ಷ ತುಂಬಿದರೂ ಕೂಡ ಇನ್ನೂ ಸೌಧಕ್ಕೆ ಸುವರ್ಣ ಕಾಲವೇ ಕೂಡಿ ಬಂದಿಲ್ಲ.

Spread the love

ಬೆಳಗಾವಿ : ಉತ್ತರ ಕರ್ನಾಟದ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು.

ಈ ಭಾಗದ ಜನರಿಗೆ ಶಕ್ತಿ ತುಂಬಬೇಕು ಎಂಬ ಸದುದ್ದೇಶದಿಂದ ಕುಂದಾನಗರಿ ಬೆಳಗಾವಿಯ ಹೊರವಲಯದಲ್ಲಿರುವ ಹಲಗಾ-ಬಸ್ತವಾಡ ಗ್ರಾಮಗಳ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುವರ್ಣ ವಿಧಾನಸೌಧವನ್ನು ಸರ್ಕಾರ ನಿರ್ಮಾಣ ಮಾಡಿತ್ತು. ಈ ಸುವರ್ಣಸೌಧಕ್ಕೆ ಇಂದು 12 ವರ್ಷಗಳ ಸಂಭ್ರಮಾಚರಣೆ.

2012ರ ಅಕ್ಟೋಬರ್‌ 11 ರಂದು 438 ಕೋಟಿ ರೂ. ವೆಚ್ಚದಲ್ಲಿ ಸರ್ಕಾರ ಯಾವೆಲ್ಲಾ ಉದ್ದೇಶಗಳನ್ನಿಟ್ಟುಕೊಂಡು ಸುವರ್ಣಸೌಧವನ್ನು ನಿರ್ಮಾಣ ಮಾಡಿತ್ತೋ, ಆ ಉದ್ದೇಶಗಳನ್ನು ಇನ್ನೂ ಈಡೇರಿಸಿಲ್ಲ. ಕೇವಲ ಕಟ್ಟಡವಾಗಿ ಬಿಳಿಯಾನೆಯಾಗಿ ಸೌಧ ನಿಂತಿದೆ. ಶಕ್ತಿಸೌಧಕ್ಕೆ ಶಕ್ತಿ ತುಂಬಬೇಕಿದ್ದ ಜನಪ್ರತಿನಿಧಿಗಳು ನಿದ್ದೆಗೆ ಜಾರಿದ್ದು, ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯಮಟ್ಟದ ಕಚೇರಿಗಳ ಸ್ಥಳಾಂತರ, ಸಚಿವರ ಕಚೇರಿಗಳು ಸೇರಿ ಹಲವು ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಕನ್ನಡಪರ, ರೈತಪರ ಹೋರಾಟಗಾರರು ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅವರ ಪ್ರಯತ್ನದ ಫಲವಾಗಿ ಸುವರ್ಣ ಸೌಧಕ್ಕೆ ಈವರೆಗೆ ಸ್ಥಳಾಂತರ ಆಗಿದ್ದು ಮಾಹಿತಿ ಹಕ್ಕು ಕಾಯ್ದೆ ಕಚೇರಿ ಮಾತ್ರ. ಆದರೆ ಆ ಕಚೇರಿಗೂ ಆಯುಕ್ತರನ್ನೂ ನೇಮಕ ಮಾಡದೇ ಇರುವುದು ಸರ್ಕಾರದ ಇಚ್ಛಾಶಕ್ತಿಯ ಕೊರತೆ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ. ಅಲ್ಲದೇ 22 ಜಿಲ್ಲಾಮಟ್ಟದ ಕಚೇರಿಗಳನ್ನೂ ಸುವರ್ಣಸೌಧದಲ್ಲಿ ಆರಂಭಿಸಲಾಗಿದೆ. ಇದು ರಾಜ್ಯಮಟ್ಟದ ಭವನವೋ? ಜಿಲ್ಲಾ ಭವನವೋ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣವಾದ ವೇಳೆ ಇಡೀ ಉತ್ತರ ಕರ್ನಾಟಕದ ಜನ ಸಂಭ್ರಮಿಸಿದ್ದರು. ನಮ್ಮ ಸಮಸ್ಯೆಗಳು ಇನ್ನು ಮುಂದೆ ಶೀಘ್ರವೇ ಇತ್ಯರ್ಥವಾಗುತ್ತದೆ. ನಮಗೂ ಒಂದು ಶಕ್ತಿ ಕೇಂದ್ರ ಸಿಕ್ಕಿತು ಎಂದು ಸಂತಸಪಟ್ಟಿದ್ದರು. ಆದರೆ ಸೌಧ ನಿರ್ಮಾಣದ ಬಳಿಕ ಬಂದ ಸರ್ಕಾರಗಳು ಸೌಧಕ್ಕೆ ಶಕ್ತಿ ತುಂಬಲೇ ಇಲ್ಲ. ಕೇವಲ ಭರವಸೆಯಲ್ಲಿಯೇ ಕಾಲ ಕಳೆದವು. ಸುವರ್ಣ ಸೌಧ ಕೇವಲ ಕಟ್ಟಡವಾಗಿಯೇ ಉಳಿಯಿತೇ ಹೊರತು ಶಕ್ತಿ ಕೇಂದ್ರ ಆಗಲೇ ಇಲ್ಲ. 60,398 ಮೀಟರ್‌ ಸುತ್ತಳತೆಯ ವಿಶಾಲವಾದ ಕಟ್ಟಡ ನಿರ್ವಹಣೆಗೆ ರಾಜ್ಯ ಸರ್ಕಾರ ಪ್ರತಿ ವರ್ಷ 5-6 ಕೋಟಿ ರೂ. ಖರ್ಚು ಮಾಡುತ್ತಿದೆ. ಅಷ್ಟಾದರೂ ಮಳೆಗಾಲದಲ್ಲಿ ಕಟ್ಟಡ ಪಾಚಿ ಕಟ್ಟುವುದು ಮಾತ್ರ ನಿಂತಿಲ್ಲ.

 

ಈವರೆಗೆ 9 ಬಾರಿ ಈ ಸೌಧದಲ್ಲಿ ಅಧಿವೇಶನ ನಡೆದಿದ್ದು, ಸಮರ್ಪಕವಾಗಿ ಚರ್ಚೆ ಆಗಿರುವುದು ಮಾತ್ರ ಶೂನ್ಯ. ಸುಮ್ಮನೆ ಫಿಕ್‌ನಿಕ್​ಗೆ ಬಂದಂತೆ ಸಚಿವರು, ಶಾಸಕರು ಬೆಳಗಾವಿಗೆ ಬರುತ್ತಾರೆ. ಹೀಗೆ ಬಂದವರು ಕಲಾಪದಲ್ಲಿ ಭಾಗಿಯಾಗಿದ್ದಕ್ಕಿಂತ ಗೋವಾ, ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನ ಸೇರಿ ಈ ಭಾಗದ ಪ್ರವಾಸಿತಾಣಗಳಿಗೆ ಹೋಗಿದ್ದೇ ಹೆಚ್ಚು.

ಎಲ್ಲ ಸಚಿವರ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಿ, ಸಚಿವರು ಪ್ರತಿ ಹದಿನೈದು ದಿವಸಕ್ಕೊಮ್ಮೆ ಇಲ್ಲಿ ಸಭೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಬೇಕು. ಅಲ್ಲದೇ ರಾಜ್ಯಮಟ್ಟದ ಕಚೇರಿಗಳನ್ನು ಕೂಡಲೇ ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮ ಈ ಸರ್ಕಾರವಾದರೂ ತೆಗೆದುಕೊಳ್ಳಬೇಕೆಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದರು.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ