ಬೆಂಗಳೂರು,ನ.3- ಆರ್ಆರ್ನಗರ ಉಪಚುನಾವಣೆಯ ಮತದಾನದಲ್ಲಿ ನಟ ದರ್ಶನ ಸೇರಿದಂತೆ ಹಲವಾರು ನಟನಟಿಯರು ತಮ್ಮ ಹಕ್ಕು ಚಲಾಯಿಸಿದರು. ನೆನಪಿರಲಿ ಪ್ರೇಮ್ ಅವರು ಪತ್ನಿ ಸಮೇತ ಕ್ಲಾರೆಟ್ ಸ್ಕೂಲ್ ಮತಗಟ್ಟೆಯಲ್ಲಿ ವೋಟ್ ಮಾಡಿದರು. ತಮ್ಮ ಹಕ್ಕು ಚಲಾಯಿಸಿದ ನಂತರ ಸರ್ಕಾರ ಮತದಾನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದೆ. ಯಾರೂ ಆತಂಕ ಪಡುವುದು ಬೇಡ. ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿದರು.
ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು. ನಾವು ಮತದಾನ ಮಾಡಿಲ್ಲವೆಂದರೆ ನಮ್ಮ ಅಭಿವೃದ್ಧಿಗೆ ನಾವೇ ಹಿನ್ನಡೆಯಾಗುತ್ತೇವೆ ಎಂದರು. ಕ್ಯಾನ್ಸರ್ಗಿಂತಲೂ ಕೋವಿಡ್ ಮಾರಕವಲ್ಲ. ಎಲ್ಲರೂ ಮುಂಜಾಗ್ರತೆ ವಹಿಸಿ ಮತದಾನ ಮಾಡಿ ಎಂದು ಕರೆ ಕೊಟ್ಟರು. ಸೇಂಟ್ ಜೋಸ್ವಿನ್ ಪಬ್ಲಿಕ್ ಶಾಲೆಯಲ್ಲಿ ನಟ, ನಿರ್ದೇಶಕ ಎಸ್.ನಾರಾಯಣ್ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರೆ, ನಟಿ ಕಾರುಣ್ಯ ರಾಮ್ ಬಿಇಟಿ ಶಾಲೆಗೆ ಕುಟುಂಬ ಸಮೇತರಾಗಿ ಆಗಮಿಸಿ ತಂದೆತಾಯಿಯ ಜೊತೆ ತಮ್ಮ ಹಕ್ಕು ಚಲಾಯಿಸಿದರು.
ದೂದ್ಪೇಡ ಖ್ಯಾತಿಯ ದಿಗಂತ್ ಮಾತನಾಡಿ, ಯಾವುದೇ ಚುನಾವಣೆಯಲ್ಲಿ ನಮ್ಮ ಆಯ್ಕೆ ನಮ್ಮ ಕರ್ತವ್ಯವಾಗಿದೆ. ಹಾಗಾಗಿ ಎಲ್ಲರು ಮತ ಚಲಾಯಿಸಬೇಕು. ಅಧಿಕಾರಿಗಳು ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಮತ ಚಾಲಯಿಸಿದ ಮಾತನಾಡಿದ ಹಿರಿಯ ನಟ ಅವಿನಾಶ್, ಕೋವಿಡ್ ಹಿನ್ನೆಲೆಯಲ್ಲಿ ವೋಟ್ ಮಾಡಲು ಭಯವಿತ್ತು. ಆದರೆ ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಲು ಉತ್ತಮ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವುದೇ ಭಯವಿಲ್ಲದೆ ಮತ ಹಾಕಬಹುದು ಎಂದರು.
ನಟಿ ಅಮೂಲ್ಯ ಮತ್ತು ಪತಿ ಜಗದೀಶ್, ನಟ ಅವಿನಾಶ್ ಮತ್ತಿತರರು ಇಂದು ಆರ್ಆರ್ನಗರ ಉಪಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಹಕ್ಕು ಚಲಾಯಿಸಿದರು.