ಬೆಂಗಳೂರು: ಬಿಜೆಪಿ ನಾಯಕರಿಗೆ ತಮ್ಮದೇ ನಿರ್ಧಾರ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಶಾಸಕರು ಒಬ್ಬರಾದ ನಂತರ ಮತ್ತೊಬ್ಬರು ಪಕ್ಷ ತೊರೆದು ಹೊರ ಹೋಗುತ್ತಿದ್ದಾರೆ. ಈ ಹೊತ್ತಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಸೋಲಿಗೆ ಬಿ.ಎಸ್. ಯಡಿಯೂರಪ್ಪ ಪಣತೊಟ್ಟಿದ್ದಾರೆ.
ಇಬ್ಬರ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ತೀವ್ರಗೊಳಿಸಿದ್ದಾರೆ.
ಕೆಲವೇ ದಿನಗಳ ಹಿಂದೆ ಒಂದೇ ಪಕ್ಷದಲ್ಲಿದ್ದ ಮಾಜಿ ಸಿಎಂಯಡಿಯೂರಪ್ಪಹಾಗೂ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಆಪ್ತರಾಗಿದ್ದರು. ಆದರೆ ಯಾವಾಗ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದರೋ ಆ ಕ್ಷಣದಿಂದಲೇ ಮುನಿಸು ಶುರುವಾಗಿದೆ. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಸ್ಪರ್ಧಿಸುವ ಕ್ಷೇತ್ರದಲ್ಲಿ ಖುದ್ದು ತಾವೇ ತೆರಳಿ ಪ್ರವಾಸ ಮಾಡಿ ಜನರಿಗೆ ಸತ್ಯ ಸಂಗತಿ ಮನವರಿಕೆ ಮಾಡುತ್ತೇನೆ ಎಂದು ಬಿಎಸ್ವೈ ಸವಾಲು ಹಾಕಿದ್ದಾರೆ.
ಲಿಂಗಾಯತರ ವಿರುದ್ಧ ಲಿಂಗಾಯತರು?
ಈ ಮೂಲಕ ಹಾಲಿ ಬಿಜೆಪಿ ನಾಯಕರು VS ಮಾಜಿಬಿಜೆಪಿನಾಯಕರ ನಡುವೆ ಭೀಕರ ಚುನಾವಣಾ ಕದನಕ್ಕೆ ಕರ್ನಾಟಕ ಸಾಕ್ಷಿಯಾಗುವುದು ಬಹುತೇಕ ಪಕ್ಕಾ. ಒಂದು ಕಡೆ ಬಿಜೆಪಿ ಹೈಕಮಾಂಡ್ ಡ್ಯಾಮೇಜ್ ಕಂಟ್ರೋಲ್ಗೆ ಖುದ್ದು ಬಿಎಸ್ವೈ ಅವರನ್ನ ಅಖಾಡಕ್ಕೆ ಇಳಿಸಿದೆ. ಇನ್ನೊಂದು ಕಡೆ ಲಿಂಗಾಯತ ನಾಯಕನ ವಿರುದ್ಧ ಲಿಂಗಾಯತ ನಾಯಕನನ್ನೇ ವಾಗ್ದಾಳಿಗೆ ಇಳಿಸುವ ತಂತ್ರ ಕೂಡ ಇದಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇದೀಗ ಮಾತಿನ ಕದನ ಮುಗಿಲು ಮುಟ್ಟಿದೆ.
ಅವರು ಹೋದರೂ ಸಮಸ್ಯೆಯಿಲ್ಲ!
ಜಗದೀಶ್ ಶೆಟ್ಟರ್, ಲಕ್ಷಣ್ ಸವದಿ ವಿರುದ್ಧ ಈಗಲೂ ವಾಗ್ದಾಳಿ ಮುಂದುವರಿಸಿರುವ ಮಾಜಿ ಸಿಎಂ ಬಿಎಸ್ವೈ, ರಾಜ್ಯದಲ್ಲಿ ಬಿಜೆಪಿ ಗೆಲುವು ನಿಶ್ಚಿತ, ಜಗದೀಶ್ ಶೆಟ್ಟರ್, ಲಕ್ಷಣ್ ಸವದಿ ಹೋದರೂ ಪಕ್ಷಕ್ಕೆ ಯಾವುದೇ ಸಮಸ್ಯೆಯಿಲ್ಲ. ಮೊದಲಿನಂತೆಯೇ 125-130 ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಾರ ಸಹಕಾರ ಇಲ್ಲದೇ ಸರ್ಕಾರ ರಚನೆ ಸಹ ಮಾಡುತ್ತೇವೆ ಎಂದಿದ್ದಾರೆ. ಈ ಮೂಲಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನಾಯಕರಿಗೆ ಹೊಸ ಸವಾಲು ಹಾಕಿದ್ದಾರೆ ಬಿಎಸ್ವೈ.
ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಇಂದು ಕೂಡ ಶೆಟ್ಟರ್ ಹಾಗೂ ಸವದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕೇಂದ್ರದ ನಾಯಕರು ನಿಮ್ಮ ಮನೆಯವರಿಗೆ ಸೀಟ್ ಕೊಡುತ್ತೇವೆ. ರಾಜ್ಯಸಭೆಗೆ ಕಳಿಸಿ, ಕೇಂದ್ರದಲ್ಲಿ ಮಂತ್ರಿ ಮಾಡುತ್ತೇವೆ ಎಂದರು. ಕೇಂದ್ರದ ನಾಯಕರು ಮನೆ ಬಾಗಿಲಿಗೆ ಬಂದರೂ ಶೆಟ್ಟರ್ ಹಠ ಬಿಡಲಿಲ್ಲ. ಅವರು ತೆಗೆದುಕೊಂಡ ತೀರ್ಮಾನ ಸರಿ ಇಲ್ಲ. ಆ ನಿರ್ಧಾರದಿಂದ ಅವರೇ ದುಷ್ಪರಿಣಾಮ ಎದುರಿಸಲಿದ್ದಾರೆ ಎಂದಿದ್ದಾರೆ ಬಿಎಸ್ವೈ.
ಬಿಎಸ್ವೈ ಹೇಳಿಕೆಗೆ ಪ್ರತ್ಯುತ್ತರ!
ಒಂದು ಕಡೆ ಬಿಎಸ್ವೈ ತೀವ್ರ ವಾಗ್ದಾಳಿ ನಡೆಸುತ್ತಾ, ಕಳೆದ ಕೆಲವು ದಿನಗಳಿಂದ ಶೆಟ್ಟರ್ ಮತ್ತು ಸವದಿ ನಿರ್ಧಾರವನ್ನು ಖಂಡಿಸುತ್ತಿದ್ದಾರೆ. ಇನ್ನೊಂದು ಕಡೆ ಯಡಿಯೂರಪ್ಪ ಅವರ ಮಾತಿಗೆ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಕೂಡ ಪ್ರತ್ಯುತ್ತರ ನೀಡುತ್ತಿದ್ದಾರೆ. ಈ ಮೂಲಕ ಒಂದೇ ಪಕ್ಷದಲ್ಲಿ ಹಲವು ದಶಕಗಳ ಕಾಲ ದುಡಿದಿದ್ದ ನಾಯಕರ ನಡುವೆಯೇ ಟಾಕ್ ಫೈಟ್ ಶುರುವಾಗಿಬಿಟ್ಟಿದೆ.
ಒಟ್ಟಾರೆ ಮತದಾನಕ್ಕೆ ಕೌಂಟ್ಡೌನ್ ಶುರುವಾಗಿರುವ ಬೆನ್ನಲ್ಲೇ ಪಕ್ಷಾಂತರ ಪರ್ವ ಜೋರಾಗಿದೆ. ಈ ನಡುವೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಿರುವುದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಇದರ ಜೊತೆಗೆ ಲಕ್ಷ್ಮಣ ಸವದಿ ವಿಚಾರ ಕೂಡ ಇದೇ ರೀತಿ ಬಿಜೆಪಿಗೆ ಹಿನ್ನಡೆ ತಂದಿದೆ. ಇಷ್ಟೆಲ್ಲದರ ನಡುವೆ ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಎಲ್ಲರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.