ಚಿತ್ರದುರ್ಗ: ಮುರುಘಾ ಮಠದಲ್ಲಿ ಆಶ್ರಯ ಪಡೆದಿದ್ದ 11 ಅನಾಥ ಮಕ್ಕಳ ಮಾಹಿತಿಯನ್ನು ಮರೆಮಾಚಲಾಗಿದ್ದು, ಆ ಎಲ್ಲ ಮಕ್ಕಳು ನಾಪತ್ತೆಯಾಗಿರುವ ಅನುಮಾನ ಕಾಡುತ್ತಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ಎಂ.ಎಲ್.ಪರಶುರಾಮ್ ಆರೋಪಿಸಿದರು.
‘ಮಠದಲ್ಲಿದ್ದ ಅನಾಥ ಮಕ್ಕಳನ್ನು ದತ್ತು ಪ್ರಕ್ರಿಯೆಗೆ ಒಳಪಡಿಸಿರುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಲಭ್ಯವಾಗಿಲ್ಲ.
ಮಕ್ಕಳ ಕಲ್ಯಾಣ ಸಮಿತಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ. ಈ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿರುವ ಆತಂಕ ಕಾಡುತ್ತಿದೆ’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಕಳವಳ ವ್ಯಕ್ತಪಡಿಸಿದರು.
‘ಮಠದಲ್ಲಿದ್ದ ಇನ್ನೂ ಹತ್ತು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ಬಗ್ಗೆ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ. ಈ ಸಂತ್ರಸ್ತರನ್ನು ಪತ್ತೆ ಮಾಡಿ ತನಿಖೆ ಮುಂದುವರಿಸುವ ಜವಾಬ್ದಾರಿ ಪೊಲೀಸರ ಮೇಲಿದೆ. ಆಗ ಮಾತ್ರ ಸಂತ್ರಸ್ತರಿಗೆ ನ್ಯಾಯ ಹಾಗೂ ಪರಿಹಾರ ಸಿಗಲು ಸಾಧ್ಯವಿದೆ. ಇದನ್ನು ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.
ಕೆ.ವಿ.ಸ್ಟ್ಯಾನ್ಲಿ ಮಾತನಾಡಿ, ‘ಪೋಕ್ಸೊ ಪ್ರಕರಣದ ಆರೋಪಿಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಒಡನಾಡಿ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯರ ತಾಯಿ ವಿರುದ್ಧ ದೂರು ದಾಖಲಿಸಲಾಗಿದೆ. ಮಕ್ಕಳನ್ನು ಪ್ರಚೋದಿಸಿದ ರೀತಿ ಪಿತೂರಿಯಂತೆ ಕಾಣುತ್ತಿದೆ. ಅನುಮಾನ ಸೃಷ್ಟಿಸಿ ಪ್ರಯೋಜನ ಪಡೆಯುವ ಹುನ್ನಾರ ಅಡಗಿದೆ’ ಎಂದು ದೂರಿದರು.
‘ಸಂತ್ರಸ್ತ ವಿದ್ಯಾರ್ಥಿನಿಯರ ತಾಯಿಯನ್ನು 12 ದಿನಗಳಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ವಾಧಾರ ಕೇಂದ್ರದಲ್ಲಿಟ್ಟಿರುವ ರೀತಿ ಸಂತ್ರಸ್ತ ವಿದ್ಯಾರ್ಥಿನಿಯರಲ್ಲಿ ಭೀತಿ ಸೃಷ್ಟಿಸಿದೆ. ಅಭದ್ರತೆ, ಆತಂಕ ಅವರನ್ನು ಕಾಡುತ್ತಿದೆ’ ಎಂದರು.